ನಿಮಗೆ ಒದೆ ಬೀಳಬಹುದು: ತಮ್ಮ ವಾಹನವನ್ನು ತಡೆದ ಬಿಜೆಪಿ ಕಾರ್ಯಕರ್ತರಿಗೆ ನಾಯ್ಡು ಎಚ್ಚರಿಕೆ
ಹೈದರಾಬಾದ್, ಜ. 5: ''ನಿಮಗೆ ಒದೆ ಬೀಳಬಹುದು. ಅನಗತ್ಯ ತೊಂದರೆ ಆಹ್ವಾನಿಸಬೇಡಿ, ನಿಮ್ಮ ಕಥೆ ಮುಗಿಯಬಹುದು. ಆಂಧ್ರ ಪ್ರದೇಶಕ್ಕಾದ ಅನ್ಯಾಯವನ್ನು ನೀವು ಬೆಂಬಲಿಸುತ್ತೀರಾ ? ನೀವು ರಸ್ತೆಯಲ್ಲಿ ಸಾಗಿದಾಗ ಜನರು ನಿಮಗೆ ಪಾಠ ಕಲಿಸುತ್ತಾರೆ,'' ಹೀಗೆಂದು ಆಕ್ರೋಶದಿಂದ ನುಡಿದವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು.
ಪ್ರಧಾನಿಯ ಬಗ್ಗೆ ನಾಯ್ಡು ನೀಡಿದ ಹೇಳಿಕೆಯನ್ನು ಖಂಡಿಸಲು ತಮ್ಮ ವಾಹನಯನ್ನು ತಡೆದ ಬಿಜೆಪಿ ಕಾರ್ಯಕರ್ತರಿಗೆ ನಾಯ್ಡು ಹೇಳಿದ ಮಾತುಗಳಿವು.
ನಾಯ್ಡು ಶನಿವಾರ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ 'ಜನ್ಮಭೂಮಿ ಮಾವೂರು' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭ ಕೆಲ ಕಾರ್ಪೊರೇಟರ್ ಗಳೂ ಸೇರಿದಂತೆ ಬಿಜೆಪಿ ನಾಯಕರು ಮುಖ್ಯಮಂತ್ರಿಯ ವಾಹನ ಪಡೆಯನ್ನು ತಡೆದು 'ಸಿಎಂ ಗೋ ಬ್ಯಾಕ್' ಎಂಬ ಘೋಷಣೆಗಳನ್ನು ಕೂಗಿದ್ದರು.
ನಾಯ್ಡು ಅವರು ಪ್ರಧಾನಿ ಮೋದಿ ಹಾಗೂ ಬಿಜೆಪಿಯನ್ನು ಸದಾ ಟೀಕಿಸುತ್ತಲೇ ಇದ್ದು, ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡದೆ ಆಂಧ್ರ ಪ್ರದೇಶದ ಜನರನ್ನು ಬಿಜೆಪಿ ಮತ್ತು ಪ್ರಧಾನಿ ವಂಚಿಸಿದ್ದಾರೆಂದು ಹೇಳಿದ್ದರು.
ತಮ್ಮ ರಾಜ್ಯದ ಹಿತಾಸಕ್ತಿಗಳಿಗೆ ತಾವು ಬಗ್ಗಿದರೂ ಕೇಂದ್ರ ಸರಕಾರ ಕಳೆದ ನಾಲ್ಕು ವರ್ಷಗಳಿಂದ ಸಹಕರಿಸುತ್ತಿಲ್ಲ ಎಂದು ನಾಯ್ಡು ಹೇಳಿದ್ದರು.