ರಾಜ್ಯಗಳ ಶಿಕ್ಷಣ ಸಾಧನೆ ಗುರುರಾಜ್ಯಗಳ ಶಿಕ್ಷಣ ಸಾಧನೆ ಗುತಿಸಿ ರ್ಯಾಂಕ್ ನೀಡುವ ವ್ಯವಸ್ಥೆ ಜಾರಿಗೆ ನಿರ್ಧಾರ: ಜಾವಡೇಕರ್
ಹೊಸದಿಲ್ಲಿ, ಜ.6: ಶೈಕ್ಷಣಿಕ ಕ್ಷೇತ್ರದಲ್ಲಿ ರಾಜ್ಯಗಳ ಸಾಧನೆಯನ್ನು ಮೌಲ್ಯಾಂಕನ ನಡೆಸಿ ಶ್ರೇಯಾಂಕಗಳನ್ನು ನೀಡುವ ಮೂಲಕ ಸಾಧನೆಗಳನ್ನು ಸುಧಾರಿಸಿಕೊಳ್ಳಲು ಆರೋಗ್ಯಕರ ಸ್ಪರ್ಧೆ ರೂಪಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಎನ್ಸಿಇಆರ್ಟಿ ಕಾರ್ಯಕಾರಿ ಸಮಿತಿ ಮತ್ತು ಪ್ರಧಾನ ಸಮಿತಿಯ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ . ಅಸ್ಸಾಂ, ಗುಜರಾತ್ ಮತ್ತು ದಿಲ್ಲಿ ರಾಜ್ಯಗಳ ಶಿಕ್ಷಣ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಶೈಕ್ಷಣಿಕ ಸಾಧನೆಯನ್ನು ಗುರುತಿಸಲು 70 ಮಾನದಂಡಗಳ ಆಧಾರದಲ್ಲಿ 1 ಸಾವಿರ ಅಂಕಗಳನ್ನು ನಿಗದಿಗೊಳಿಸಲಾಗಿದೆ . ಇದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಯಾವ ರಾಜ್ಯಗಳ ಸಾಧನೆ ಸುಧಾರಿಸಬೇಕಿದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಸಚಿವರು ತಿಳಿಸಿದ್ದಾರೆ. 2021ರ ವೇಳೆಗೆ ಶಾಲಾ ಪಠ್ಯಕ್ರಮದಲ್ಲಿ ಶೇ.50ರಷ್ಟು ಕಡಿತಗೊಳಿಸಲು ಉದ್ದೇಶಿಸಲಾಗಿದ್ದು, ಹಂತಹಂತವಾಗಿ ಕಡಿತವಾಗಲಿದೆ. ಈ ವರ್ಷ ಪಠ್ಯಕ್ರಮದಲ್ಲಿ ಶೇ.10ರಿಂದ 15ರಷ್ಟು ಕಡಿಮೆಯಾಗಲಿದೆ.
ಸಮಗ್ರ ಶಿಕ್ಷಣ ಕ್ರಮಕ್ಕೆ ಒತ್ತು ನೀಡಲು ನಿರ್ಧರಿಸಲಾಗಿದ್ದು ಜೀವನ ಕೌಶಲ್ಯ ಶಿಕ್ಷಣ, ಅನುಭವದ ಕಲಿಕೆ, ಮೌಲ್ಯ ಶಿಕ್ಷಣ, ದೈಹಿಕ ಶಿಕ್ಷಣವನ್ನು ಶಿಕ್ಷಣದ ಭಾಗವನ್ನಾಗಿಸಲು ನಿರ್ಧರಿಸಲಾಗಿದೆ. ಅಲ್ಲದೆ ಎನ್ಸಿಆರ್ಟಿಯಲ್ಲಿ ಹೆಚ್ಚಿನ ಪುಸ್ತಕಗಳನ್ನು ಮುದ್ರಿಸಲು ಸಮಿತಿ ನಿರ್ಧರಿಸಿದೆ. ಎರಡು ವರ್ಷದ ಹಿಂದೆ ಎನ್ಸಿಆರ್ಟಿಯಲ್ಲಿ ವರ್ಷಕ್ಕೆ 2 ಕೋಟಿ ಪುಸ್ತಕ ಮುದ್ರಿಸಲಾಗುತ್ತಿತ್ತು. ಈ ವರ್ಷ 6 ಕೋಟಿ ಪುಸ್ತಕ ಮುದ್ರಿಸಲಾಗಿದ್ದು, ಮುಂದಿನ ವರ್ಷ ಇದು 8 ಕೋಟಿಗೆ ತಲುಪಲಿದೆ ಎಂದು ಜಾವಡೇಕರ್ ತಿಳಿಸಿದ್ದಾರೆ.