ಎಐಎಂಐಎಂ ಪಕ್ಷದ ಸ್ಪೀಕರ್ ಮುಂದೆ ಪ್ರಮಾಣ ವಚನ ಸ್ವೀಕರಿಸಲ್ಲ ಎಂದ ಬಿಜೆಪಿ ಶಾಸಕ !
ಇದಕ್ಕವರು ನೀಡಿದ ಕಾರಣವೇನು ಗೊತ್ತಾ ?
ಹೊಸದಿಲ್ಲಿ,ಜ.6: ತೆಲಂಗಾಣದ ಏಕೈಕ ಬಿಜೆಪಿ ಶಾಸಕ ರಾಜಾ ಸಿಂಗ್ ರಾಜ್ಯ ವಿಧಾನ ಸಭೆಯ “ಹಂಗಾಮಿ ಸ್ಪೀಕರ್ ಅಖಿಲ ಭಾರತ ಮಜ್ಲಿಸೆ ಇತ್ತೆಹದುಲ್ ಮುಸ್ಲಿಮಿನ್ (ಎಐಎಂಐಎಂ) ಪಕ್ಷದ ಮುಮ್ತಾಝ್ ಅಹಮದ್ ಖಾನ್ ಅವರ ಮುಂದೆ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದಾರೆ.
ಈ ಕುರಿತು ಟ್ವಿಟರ್ನಲ್ಲಿ ಹೇಳಿಕೆ ನೀಡಿರುವ ಸಿಂಗ್, ಹಂಗಾಮಿ ಸ್ಪೀಕರ್ ಅವರ ಪಕ್ಷ ಹಿಂದುಗಳನ್ನು ಸರ್ವನಾಶ ಮಾಡಲು ಬಯಸುತ್ತದೆ. ಅವರು ವಂದೇ ಮಾತರಂ ಹಾಡುವುದಿಲ್ಲ ಮತ್ತು ಭಾರತ್ ಮಾತಾ ಕಿ ಜೈ ಹೇಳುವುದಿಲ್ಲ. ಹಾಗಾಗಿ ನಾನು ಅವರ ಮುಂದೆ ಪ್ರಮಾಣ ವಚನ ಸ್ವೀಕರಿಸುವುದಿಲ್ಲ” ಎಂದು ತಿಳಿಸಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ರಾಜ್ಯ ಚುನಾವಣೆಗೂ ಮುನ್ನ ಉವೈಸಿಯ ಎಐಎಂಐಎಂ ಪಕ್ಷವನ್ನು ಮಿತ್ರಪಕ್ಷ ಎಂದು ಸಂಬೋಧಿಸಿದ್ದರು. ಎರಡು ಪಕ್ಷಗಳ ನಡುವಿನ ಸೌಹಾರ್ದತ ಸಂಕೇತವಾಗಿ ರಾವ್ ಉವೈಸಿ ಪಕ್ಷದ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದರು. ಎಐಎಂಐಎಂ ಅನ್ನು ಒಂದು ಕೊಳಕು ಪಕ್ಷ ಎಂದು ಮತ್ತು ಮುಖ್ಯಮಂತ್ರಿಯನ್ನು ಅದರ ಮತ್ತು ನಿಝಾಮ್ನ ಅನುಯಾಯಿ ಎಂದು ಜರೆದಿರುವ ಗೋಶಮಹಲ್ ಕ್ಷೇತ್ರದ ವಿವಾದಿತ ಶಾಸಕ ರಾಜಾ ಸಿಂಗ್ ತಾನು ಸೋಮವಾರ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರ ನಿವಾಸಕ್ಕೂ ತೆರಳುವುದಿಲ್ಲ ಮತ್ತು ಮರುದಿನ ವಿಧಾನ ಸಭೆಗೂ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.