ಎರಿಕ್ಸನ್ ಮೊಕದ್ದಮೆ: ಅನಿಲ್ ಅಂಬಾನಿಗೆ ಸುಪ್ರೀಂ ಕೋರ್ಟ್ ನೋಟಿಸ್
ಹೊಸದಿಲ್ಲಿ, ಜ.7: ಬಾಕಿ ಪಾವತಿ ಮಾಡದೇ ಇರುವ ಕುರಿತು ಎರಿಕ್ಸನ್ ಇಂಡಿಯಾ ಕಂಪೆನಿಯು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ರಿಲಯನ್ಸ್ ಕಮ್ಯುನಿಕೇಶನ್ಸ್ ಲಿ. ಅಧ್ಯಕ್ಷ ಅನಿಲ್ ಅಂಬಾನಿ ಮತ್ತಿತರರಿಗೆ ನೋಟಿಸ್ ಜಾರಿಗೊಳಿಸಿದೆ.
ಎರಿಕ್ಸನ್ ಇಂಡಿಯಾಗೆ ಸಂಸ್ಥೆ ಪಾವತಿಸಬೇಕಾಗಿರುವ ಬಾಕಿಗೆ ಸಂಬಂಧಿಸಿದಂತೆ ರೂ. 118 ಕೋಟಿ ಸ್ವೀಕರಿಸಿ ಕಂಪೆನಿ ನಂಬಿಕೆಗೆ ಅರ್ಹವೆಂದು ಸಾಬೀತುಪಡಿಸಲು ಅನುವು ಮಾಡಿಕೊಡಬೇಕೆಂದು ರಿಲಯನ್ಸ್ ಕಮ್ಯುನಿಕೇಶನ್ಸ್ ಪರ ವಾದಿಸಿದ ಹಿರಿಯ ವಕೀಲರುಗಳಾದ ಕಪಿಲ್ ಸಿಬಲ್ ಹಾಗೂ ಮುಕುಲ್ ರೋಹ್ಟಗಿ ಕೋರಿದ್ದರು.
ಆದರೆ ಎರಿಕ್ಸನ್ ಕಂಪೆನಿಯ ವಕೀಲರು ಈ ಪ್ರಸ್ತಾವವನ್ನು ತಿರಸ್ಕರಿಸಿದರಲ್ಲದೆ ರಿಲಯನ್ಸ್ ಪಾವತಿಸಬೇಕಾಗಿರುವ ಸಂಪೂರ್ಣ ಬಾಕಿ ಮೊತ್ತವಾದ ರೂ. 550 ಕೋಟಿ ಜಮೆಗೊಳಿಸಬೇಕು ಎಂದು ಆಗ್ರಹಿಸಿದರು.
ರಿಜಿಸ್ಟ್ರಿಯಲ್ಲಿ ರೂ. 118 ಕೋಟಿ ಮೊತ್ತದ ಡಿಮಾಂಡ್ ಡ್ರಾಫ್ಟ್ ಜಮೆಗೊಳಿಸುವಂತೆ ಸುಪ್ರೀಂ ಕೋರ್ಟ್ ಪೀಠ ನಂತರ ರಿಲಯನ್ಸ್ ಕಮ್ಯುನಿಕೇಶನ್ಸ್ ಗೆ ತಿಳಿಸಿತು.
Next Story