ಸಿವಿಸಿ ವರದಿ ಆಧಾರದಲ್ಲಿ ಅಲೋಕ್ ವರ್ಮಾರನ್ನು ವಜಾಗೊಳಿಸಬೇಡಿ: ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ
“ನಕಲಿ ಕಾನೂನು ತಜ್ಞರ ಮಾತನ್ನು ಪ್ರಧಾನಿ ಆಲಿಸಬಾರದು”
ಹೊಸದಿಲ್ಲಿ, ಜ. 10: ಕೇಂದ್ರ ಜಾಗೃತ ಆಯೋಗ (ಸಿವಿಸಿ)ದ ವರದಿಯ ಆಧಾರದಲ್ಲಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಹುದ್ದೆಯಿಂದ ವಜಾಗೊಳಿಸಬಾರದು ಎಂದು ಬಿಜೆಪಿಯ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.
ತಪ್ಪು ಸಲಹೆ ನೀಡುವ ಹಾಗೂ ಸರಕಾರವನ್ನು ಇಂತಹ ಬಿಕ್ಕಟ್ಟಿನಲ್ಲಿ ಸಿಲುಕಿಸುವ ನಕಲಿ ಕಾನೂನು ತಜ್ಞರ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಲಿಸಬಾರದು ಎಂದು ಅವರು ಹೇಳಿದ್ದಾರೆ. ಬುಧವಾರ ಕರ್ತವ್ಯ ಆರಂಭಿಸಿದ ವರ್ಮಾ ಅವರನ್ನು ಭೇಟಿಯಾಗಲು ಸ್ವಾಮಿ ಸಿಬಿಐ ಕೇಂದ್ರ ಕಚೇರಿಗೆ ಆಗಮಿಸಿದರು. ‘ತಪ್ಪು ವರದಿ’ ನೀಡಿದ ಇನ್ನೋರ್ವ ಅಧಿಕಾರಿಯ ಆವೃತ್ತಿಯನ್ನು ಕೇಂದ್ರ ವಿಚಕ್ಷಣಾ ಆಯೋಗದ ವರದಿ ಆಧರಿಸಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ‘‘ಇದನ್ನು ತನಿಖೆ ನಡೆಸಬೇಕಾದ ಅಗತ್ಯತೆ ಇದೆ. ಇದು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಲಾರೆ (ವರ್ಮಾ ಅವರನ್ನು ಅಮಾನತುಗೊಳಿಸುವುದು) ವರ್ಮಾ ಅವರನ್ನು ವಜಾ ಮಾಡಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಈ ವಿಷಯದ ಬಗ್ಗೆ ಪ್ರಧಾನಿ ಅವರು ಚಾರಿತ್ರಿಕ ಹೆಜ್ಜೆ ಇರಿಸಲಿದ್ದಾರೆ ಎಂದು ನಾನು ನಿರೀಕ್ಷಿಸುತ್ತೇನೆ’’ ಎಂದು ಸ್ವಾಮಿ ಹೇಳಿದ್ದಾರೆ.
ನಾನು ಈ ವಿಷಯಕ್ಕೆ ಸಂಬಂಧಿಸಿ ಸಿಬಿಐ ಕೇಂದ್ರ ಕಚೇರಿಗೆ ಭೇಟಿ ನೀಡಿರುವುದು ಅಲ್ಲ ಎಂದು ಅವರು ಹೇಳಿದ್ದಾರೆ.