ಹೊಸ ಹುದ್ದೆ ವಹಿಸಿಕೊಳ್ಳಲು ನಿರಾಕರಿಸಿದ ಅಲೋಕ್ ವರ್ಮಾ
ಸಿಬಿಐಯನ್ನು ಸರಕಾರ ಹತ್ತಿಕ್ಕುತ್ತಿದೆ ಎಂದ ಪದಚ್ಯುತ ಮುಖ್ಯಸ್ಥ
ಹೊಸದಿಲ್ಲಿ, ಜ.11: ಸಿಬಿಐ ಮುಖ್ಯಸ್ಥರ ಹುದ್ದೆಯಿಂದ ಪದಚ್ಯುತಗೊಂಡಿರುವ ಅಲೋಕ್ ವರ್ಮಾ ತಮಗೆ ನೀಡಲಾದ ಅಗ್ನಿಶಾಮಕ ದಳ, ನಾಗರಿಕ ರಕ್ಷಣೆ ಮತ್ತು ಹೋಂ ಗಾರ್ಡ್ಸ್ ಡಿಜಿ ಹುದ್ದೆಯನ್ನು ವಹಿಸಿಕೊಳ್ಳಲು ನಿರಾಕರಿಸಿದ್ದಾರೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕಾರ್ಯದರ್ಶಿ ಚಂದ್ರಮೌಳಿ ಸಿ ವರ್ಮ ಅವರಿಗೆ ಪತ್ರ ಬರೆದಿರುವ ವರ್ಮಾ, ``ಕೇಂದ್ರ ಜಾಗೃತ ಆಯೋಗದ ವರದಿಯಲ್ಲಿರುವ ಮಾಹಿತಿಯ ಬಗ್ಗೆ ವಿವರಣೆ ನೀಡಲು ನನಗೆ ಉನ್ನತಾಧಿಕಾರ ಆಯ್ಕೆ ಸಮಿತಿ ಅವಕಾಶ ನೀಡಿಲ್ಲ'' ಎಂದು ವಿವರಿಸಿದ್ದಾರೆ
“ನೈಸರ್ಗಿಕ ನ್ಯಾಯವನ್ನು ಕಡೆಗಣಿಸಿ ಇಡೀ ಪ್ರಕ್ರಿಯೆಯನ್ನು ತಲೆ ಕೆಳಗಾಗಿಸಿ ನನ್ನನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ಕಿತ್ತೊಗೆಯಲಾಗಿದೆ, ನಿನ್ನೆಯ ಸಭೆಯಲ್ಲಿ ಕೈಗೊಂಡ ತೀರ್ಮಾನಗಳು ನನ್ನ ಕಾರ್ಯನಿರ್ವಹಣೆಯನ್ನು ಪ್ರತಿಫಲಿಸುವುದು ಮಾತ್ರವಲ್ಲದೆ ಸರಕಾರದ ಬಹುಸಂಖ್ಯಾತ ಮಂದಿಯೇ ನೇಮಿಸಿದ ಸಿವಿಸಿ ಮುಖಾಂತರ ಸರಕಾರ ಹೇಗೆ ಸಿಬಿಐ ಸಂಸ್ಥೆಯನ್ನು ಹತ್ತಿಕ್ಕುತ್ತಿದೆ ಎಂಬುದರ ದೃಷ್ಟಾಂತವೂ ಆಗಿದೆ. ಸಂಘಟಿತವಾಗಿ ಆತ್ಮಾವಲೋಕನ ಮಾಡಬೇಕಾದ ಸಮಯವಿದು,'' ಎಂದು ಅಲೋಕ್ ವರ್ಮಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
``ನಾನು ಜುಲೈ 31, 2017ರಂದೇ ನಿವೃತ್ತನಾಗಬೇಕಿತ್ತು, ಇದೀಗ ನಿವೃತ್ತಿ ವಯಸ್ಸು ದಾಟಿರುವುದರಿಂದ ಇಂದಿನಿಂದಲೇ ನಿವೃತ್ತಿಯಾಗಿದ್ದೇನೆಂದು ಪರಿಗಣಿಸಬೇಕು'' ಎಂದು ಅವರು ತಮ್ಮ ಪತ್ರದಲ್ಲಿ ಕೋರಿದ್ದಾರೆ.