ದಕ್ಷ, ಪ್ರಾಮಾಣಿಕ ಅಧಿಕಾರಿ ಶಾ ಫೈಝಲ್ ದುರ್ಬಲರ ಕಲ್ಯಾಣಕ್ಕೆ ಶ್ರಮಿಸಿದ್ದರು
ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್
ಶ್ರೀನಗರ, ಜ.13: ರಾಜಕಾರಣಿಯಾಗುವ ಬದಲು ಮಾಜಿ ಐಎಎಸ್ ಅಧಿಕಾರಿ ಶಾ ಫೈಝಲ್ ಒಳ್ಳೆಯ ಅಧಿಕಾರಿಯಾಗಿಯೇ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬಹುದಿತ್ತು ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ಆದರೆ ನಾಗರಿಕ ಸೇವೆಗೆ ರಾಜೀನಾಮೆ ನೀಡುವ ಫೈಝಲ್ ನಿರ್ಧಾರ ಅವರ ವೈಯಕ್ತಿಕ; ಅವರಿಗೆ ಶುಭಹಾರೈಕೆಗಳು ಎಂದು ಪ್ರತಿಕ್ರಿಯಿಸಿದರು.
ಜಮ್ಮು ಕಾಶ್ಮೀರ ಬಗೆಗಿನ ಸರ್ಕಾರದ ನೀತಿಯನ್ನು ಖಂಡಿಸಿ ಫೈಝಲ್ ಕಳೆದ ಬುಧವಾರ ರಾಜೀನಾಮೆ ನೀಡಿದ್ದರು. ತಳಮಟ್ಟದಲ್ಲಿ ಕೆಲಸ ಮಾಡಲು ತಾವು ಬಯಸಿದ್ದು, ಜಮ್ಮು ಕಾಶ್ಮೀರ ರಾಜಕೀಯಕ್ಕೆ ಧುಮುಕುವುದಾಗಿ ತಿಳಿಸಿದ್ದರು. ಸದ್ಯಕ್ಕೆ ಯಾವುದೇ ಪಕ್ಷವನ್ನು ಸೇರುವ ಸಾಧ್ಯತೆಯನ್ನು ಅವರು ನಿರಾಕರಿಸಿದ್ದರು.
"ಫೈಝಲ್ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ. ಉತ್ಸಾಹದಿಂದ ರಾಜ್ಯದ ಕಲ್ಯಾಣಕ್ಕೆ ಅದರಲ್ಲೂ ಮುಖ್ಯವಾಗಿ ಸಮಾಜದ ದುರ್ಬಲ ವರ್ಗದವರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದರು" ಎಂದು ಮಲಿಕ್ ಹೇಳಿದ್ದಾರೆ. ಅವರು ಐಎಎಸ್ ಅಧಿಕಾರಿಯಾಗಿಯೇ ಮುಂದುವರಿದಿದ್ದರೆ ಸಮಾಜಕ್ಕೆ ಒಳ್ಳೆಯ ರೀತಿಯಲ್ಲಿ ಸೇವೆ ಮುಂದುವರಿಸುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.