ಗೋಹತ್ಯೆ ಆರೋಪ: 7 ಮಂದಿಯ ವಿರುದ್ಧ ಎನ್ ಎಸ್ ಎ ಅಡಿ ಪ್ರಕರಣ ದಾಖಲು
ಬುಲಂದ್ಶಹರ್ ಹಿಂಸಾಚಾರ
ಬುಲಂದ್ಶಹರ್ (ಉತ್ತರಪ್ರದೇಶ), ಜ. 14: ಕಳೆದ ತಿಂಗಳು ಸಿಯಾನಾ ತೆಹ್ಸಿಲ್ನಲ್ಲಿ ನಡೆದಿದೆ ಎಂದು ಹೇಳಲಾದ ಗೋ ಹತ್ಯೆ ಘಟನೆಗೆ ಸಂಬಂಧಿಸಿ ಬಂಧಿಸಲಾಗಿದ್ದ 7 ಮಂದಿಯ ವಿರುದ್ಧ ಬುಲಂದ್ಶಹರ್ ಜಿಲ್ಲಾಡಳಿತ ಸೋಮವಾರ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿದೆ.
ಡಿಸೆಂಬರ್ 3ರಂದು ಸಿಯಾನದ ಮಹಾವಾ ಗ್ರಾಮದ ಹೊಲದಲ್ಲಿ ಜಾನುವಾರುಗಳ ಕಳೇಬರ ಪತ್ತೆಯಾದ ಬಳಿಕ ಗುಂಪೊಂದು ಛಿಂಗಾರವಥಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿತ್ತು.
ಹಿಂಸಾಚಾರದ ಸಂದರ್ಭ ಗುಂಪೊಂದು ಹಾರಿಸಿದ ಗುಂಡಿಗೆ ಛಿಂಗಾರವಥಿ ಗ್ರಾಮದ ಇನ್ಸ್ಪೆಕ್ಟರ್ ಸುಬೋಧ್ ಕುಮಾರ್ (44) ಹಾಗೂ ನಾಗರಿಕ ಸುಮಿತ್ ಕುಮಾರ್ (20) ಮೃತಪಟ್ಟಿದ್ದರು.
ಹೆಸರಿಸಲಾದ 27 ಮಂದಿ ಒಳಗೊಂಡಂತೆ ಸುಮಾರು 80 ಮಂದಿ ವಿರುದ್ಧ ಹಿಂಸಾಚಾರಕ್ಕೆ ಸಂಬಂಧಿಸಿ ಒಂದು ಪ್ರಕರಣ ಹಾಗೂ ಗೋಹತ್ಯೆಗೆ ಸಂಬಂಧಿಸಿ ಇನ್ನೊಂದು ಪ್ರಕರಣವನ್ನು ಸಿಯಾನ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು.
ಗೋಹತ್ಯೆ ಪ್ರಕರಣದಲ್ಲಿ ಬಂಧಿತರಾದವರ ವಿರುದ್ಧ ಕಠಿಣ ಎನ್ಎಸ್ಎ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿ ಅನುಜ್ ಝಾ ತಿಳಿಸಿದ್ದಾರೆ.