ಸಿಪಿಎಂ–ಕಾಂಗ್ರೆಸ್ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಸೀತಾರಾಂ ಯೆಚೂರಿ
ಕೋಲ್ಕೊತ್ತಾ, ಜ. 14: ವಿವಿಧ ರಾಜ್ಯಗಳಲ್ಲಿ ರಾಜಕೀಯ ಸನ್ನಿವೇಶ ಭಿನ್ನವಾಗಿರುವುದರಿಂದ ಲೋಕಸಭೆ ಚುನಾವಣೆಯವಲ್ಲಿ ಸಿಪಿಐ (ಎಂ)-ಕಾಂಗ್ರೆಸ್ ಮೈತ್ರಿ ರಾಜ್ಯ ಮಟ್ಟದಿಂದ ಆರಂಭವಾಗಬೇಕು ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಹೇಳಿದ್ದಾರೆ.
ಪಶ್ಚಿಮಬಂಗಾಳದಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಅನ್ನು ಸೋಲಿಸಲು ಚುನಾವಣಾ ಹೊಂದಾಣಿಕೆ ಬಗ್ಗೆ ರಾಜ್ಯ ಸಿಪಿಐ (ಎಂ) ನ ಒಂದು ವರ್ಗ ಆಸಕ್ತಿ ಹೊಂದಿರುವ ಸಂದರ್ಭದಲ್ಲಿ ಯೆಚೂರಿ ಅವರ ಈ ಹೇಳಿಕೆ ಹೊರಬಿದ್ದಿದೆ.
ವಿವಿಧ ರಾಜ್ಯಗಳಲ್ಲಿ ರಾಜಕೀಯ ಸನ್ನಿವೇಶ ವಿಭಿನ್ನ ಎಂದು ನಾವು ಹೇಳುತ್ತೇವೆ. ಆದುದರಿಂದ ಕಾಂಗ್ರೆಸ್ನೊಂದಿಗಿನ ಯಾವುದೇ ಮಾತುಕತೆ ಕೂಡ ರಾಜ್ಯ ಮಟ್ಟದಿಂದ ಆರಂಭವಾಗಬೇಕು ಎಂದು ಪಶ್ಚಿಮಬಂಗಾಳದ ಕೈಗಾರಿಕೆ ಸಚಿವ ಹಾಗೂ ಪಾಲಿಟ್ ಬ್ಯುರೋ ಸದಸ್ಯ ನಿರುಪಮ್ ಸೇನ್ ಅವರ ಶ್ರದ್ಧಾಂಜಲಿ ಸಭೆಯ ನೇಪಥ್ಯದಲ್ಲಿ ಅವರು ಹೇಳಿದರು.
ಬಿಜೆಪಿ ವಿರೋಧಿ ರಂಗ ರೂಪಿಸಲು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ನೊಂದಿಗೆ ಸಿಪಿಐ (ಎಂ) ಯಾಕೆ ಮಾತುಕತೆ ಆರಂಭಿಸುತ್ತಿಲ್ಲ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.
ಉತ್ತರಪ್ರದೇಶದಲ್ಲಿ ಎಸ್ಪಿ ಹಾಗೂ ಬಿಎಸ್ಪಿ ಜೊತೆ ಮೈತ್ರಿ ಸಕಾರಾತ್ಮಕ ಬೆಳವಣಿಗೆಯಾಗಿತ್ತು ಹಾಗೂ ಇನ್ನೂ ಹೆಚ್ಚು ನಡೆಯಬೇಕಿದೆ. ಕೇಂದ್ರದಲ್ಲಿ 2019ರ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ರಂಗವನ್ನು ಎದುರು ನೋಡುತ್ತಿದ್ದೇವೆ ಎಂದು ಸೀತಾರಾಮ್ ಯೆಚೂರಿ ಹೇಳಿದರು.