ದೇಶ ದ್ರೋಹ ಪ್ರಕರಣ: ಕನ್ನಯ್ಯ ಕುಮಾರ್ ವಿರುದ್ಧದ ಚಾರ್ಜ್ ಶೀಟ್ ಪರಿಗಣಿಸಿದ ನ್ಯಾಯಾಲಯ
ಹೊಸದಿಲ್ಲಿ, ಜ. 15: ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ 2016ರಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಹಾಗೂ ಇತರ ವಿರುದ್ಧ ಸಲ್ಲಿಸಲಾದ ಚಾರ್ಜ್ ಶೀಟ್ (ಆರೋಪ ಪಟ್ಟಿ) ಯನ್ನು ಪರಿಗಣಿಸಲು ದಿಲ್ಲಿ ಉಚ್ಚ ನ್ಯಾಯಾಲಯ ಜನವರಿ 19ರಂದು ದಿನಾಂಕ ನಿಗದಿಪಡಿಸಿದೆ.
ಮುಖ್ಯ ಮೆಟ್ರೋಪಾಲಿಟಿನ್ ದಂಡಾಧಿಕಾರಿ ದೀಪಕ್ ಶೆರಾವತ್ ರಜೆಯಲ್ಲಿ ಇರುವುದರಿಂದ ಈ ಪ್ರಕರಣ ವಿಚಾರಣೆಯನ್ನು ಜನವರಿ 19ಕ್ಕೆ ನಿಗದಿಪಡಿಸಲಾಗಿದೆ.
2016 ಫೆಬ್ರವರಿಯಲ್ಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ರ್ಯಾಲಿಯ ನೇತೃತ್ವವನ್ನು ಕನ್ಹಯ್ಯ ಕುಮಾರ್ ಹಾಗೂ ಇತರರು ವಹಿಸಿದ್ದರು ಹಾಗೂ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದ್ದರು ಎಂದು ಆರೋಪಿಸಿ ದಿಲ್ಲಿ ಪೊಲೀಸರು ನಗರದ ನ್ಯಾಯಾಲಯದಲ್ಲಿ ಸೋಮವಾರ ಆರೋಪ ಪಟ್ಟಿ ಸಲ್ಲಿಸಿದ್ದರು.
ಸಂಸತ್ ದಾಳಿಯ ರೂವಾರಿ ಎಂದು ಹೇಳಲಾದ ಅಪ್ಝಲ್ ಗುರುನನ್ನು ಗಲ್ಲಿಗೇರಿಸಿದ ದಿನವಾದ 2016 ಫೆಬ್ರವರಿ 9ರಂದು ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಹೇಳಲಾದ ಪ್ರಕರಣಕ್ಕೆ ಸಂಬಂಧಿಸಿ ಜೆಎನ್ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ವಿರುದ್ಧ ಕೂಡ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.