ಮಧ್ಯಂತರ ಬಜೆಟ್: ವೀಡಿಯೊ ಲಿಂಕ್ ಮೂಲಕ ಜೇಟ್ಲಿ ಹೇಳಿದ್ದೇನು?
ಹೊಸದಿಲ್ಲಿ, ಜ. 18: ಫೆಬ್ರವರಿ 1ರಂದು ಮಂಡಿಸಲು ಉದ್ದೇಶಿಸಿರುವ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಈ ಬಾರಿ ಲೇಖಾನುದಾನವಷ್ಟೇ ಆಗಿರುವುದಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಚುನಾವಣಾ ವರ್ಷ ಕೇವಲ ಲೇಖಾನುದಾನ ಮಂಡಿಸುವ ಸಂಪ್ರದಾಯವನ್ನು ಬಿಟ್ಟು, ದೇಶದ ಆರ್ಥಿಕತೆ ಅದರಲ್ಲೂ ಮುಖ್ಯವಾಗಿ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಂಕಷ್ಟದ ಹಿನ್ನೆಲೆಯಲ್ಲಿ ಇದನ್ನು ಲೇಖಾನುದಾನಕ್ಕೆ ಸೀಮಿತಗೊಳಿಸುವ ಸಾಧ್ಯತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಸಕ್ತ ವರ್ಷದ ಬಜೆಟ್ಗೆ ಅವರು ಹಾಜರಾಗಲು ಸಾಧ್ಯವಾಗದು ಎಂಬ ವದಂತಿಗಳ ನಡುವೆಯೇ ಟಿವಿ ವಾಹಿನಿಯೊಂದು ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವೀಡಿಯೊ ಲಿಂಕ್ ಮೂಲಕ ಮಾತನಾಡಿದ ಹಣಕಾಸು ಸಚಿವರು ಈ ಬಗ್ಗೆ ತಿಳಿಸಿದರು. ವೈದ್ಯಕೀಯ ತಪಾಸಣೆಗಾಗಿ ನ್ಯೂಯಾರ್ಕ್ಗೆ ತೆರಳಿರುವ ಜೇಟ್ಲಿ, ಈ ಪ್ರಮುಖ ಕಾರ್ಯವನ್ನು ನಿರ್ವಹಿಸಲು ತಮಗೆ ಸಾಧ್ಯವಾಗದು ಎಂಬ ಯಾವ ಸುಳಿವನ್ನೂ ಬಿಟ್ಟುಕೊಡಲಿಲ್ಲ.
ರಾಷ್ಟ್ರೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಮತ್ತು ಸಂಪ್ರದಾಯಕ್ಕೆ ಬದ್ಧವಾಗಿ ಆರ್ಥಿಕತೆಗೆ ಎದುರಾಗಿರುವ ಆತಂಕಗಳನ್ನು ಪರಿಹರಿಸುವ ಅಗತ್ಯವಿದೆ. "ಚುನಾವಣಾ ವರ್ಷದ ಬಜೆಟ್ ಮಧ್ಯಂತರ ಬಜೆಟ್ ಆಗಿರುವುದು ಸಂಪ್ರದಾಯ. ಆದರೆ ದೇಶದ ವಿಸ್ತತ ಹಿತಾಸಕ್ತಿ, ತಾನು ಕೂಡಾ ಮಧ್ಯಂತರ ಬಜೆಟ್ನ ಭಾಗ ಎಂದು ಹೇಳುತ್ತಿದೆ" ಎಂದು ಜೇಟ್ಲಿ ವಿವರಿಸಿದ್ದಾರೆ.
ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಂಘರ್ಷ, ಇಂಥ ಸವಾಲುಗಳಲ್ಲೊಂದು. ಇದರಿಂದಾಗಿ ಸರ್ಕಾರ ಸಂಪ್ರದಾಯದಿಂದ ಹಿಂದೆ ಸರಿಯಬೇಕಾಗಬಹುದು. ಕೃಷಿ ಉತ್ಪನ್ನಗಳ ಅಧಿಕ ಉತ್ಪಾದನೆ ಮತ್ತು ಪ್ರಮುಖ ಕೃಷ್ಯುತ್ಪನ್ನಗಳ ಬೆಲೆ ಏರಿಕೆ ನಿಧಾನಗತಿಯಲ್ಲಿರುವುದು ಆತಂಕದ ವಿಚಾರ ಎಂದು ತಿಳಿಸಿದರು.