ಕನ್ಹಯ್ಯ ವಿರುದ್ಧದ ಚಾರ್ಜ್ ಶೀಟ್ ಸ್ವೀಕರಿಸಲು ನಿರಾಕರಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ, ಜ.19: ದಿಲ್ಲಿ ಸರಕಾರದಿಂದ ಅನುಮತಿ ಪಡೆಯದೆ ಜೆಎನ್ ಯು ಮಾಜಿ ವಿದ್ಯಾರ್ಥಿ ಯೂನಿಯನ್ ನಾಯಕ ಕನ್ಹಯ್ಯ ಕುಮಾರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ ದಿಲ್ಲಿ ಪೊಲೀಸರನ್ನು ದಿಲ್ಲಿ ಹೈಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆಯಲ್ಲದೆ ಚಾರ್ಜ್ ಶೀಟ್ ಸ್ವೀಕರಿಸಲು ನಿರಾಕರಿಸಿದೆ.
``ಕಾನೂನು ಇಲಾಖೆಯಿಂದ ಅನುಮತಿ ಪಡೆಯದೆ ನೀವೇಕೆ ಚಾರ್ಜ್ ಶೀಟ್ ಸಲ್ಲಿಸಿದ್ದೀರಿ?'' ಎಂದು ಪ್ರಕರಣದ ವಿಚಾರಣೆ ಸಂದರ್ಭ ನ್ಯಾಯಾಲಯ ಹೇಳಿದಾಗ ಮುಂದಿನ 10 ದಿನಗಳೊಳಗಾಗಿ ಸರಕಾರದಿಂದ ಅನುಮತಿ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ, 2016ರಲ್ಲಿ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪೊಲೀಸರು ಕನ್ಹಯ್ಯ ಕುಮಾರ್ ವಿರುದ್ಧ 1,200 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಚಾರ್ಜ್ ಶೀಟಿನಲ್ಲಿ ಕನ್ಹಯ್ಯ ಹೊರತಾಗಿ ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಹಾಗೂ ಜಮ್ಮು ಕಾಶ್ಮೀರದ ಏಳು ವಿದ್ಯಾರ್ಥಿಗಳಾದ- ಅಖಿಬ್ ಹುಸೈನ್, ಮುಜೀಬ್ ಹುಸೈನ್, ಮುನೀಬ್ ಹುಸೈನ್, ಉಮರ್ ಗುಲ್, ರಯೀಸಾ ರಸೂಲ್, ಬಶೀರ್ ಭಟ್ ಮತ್ತು ಬಷಾರತ್ ಅವರ ಹೆಸರುಗಳೂ ಉಲ್ಲೇಖಗೊಂಡಿದ್ದವು.
ತಮ್ಮ ವಿರುದ್ಧದ ಆರೋಪ ಮತ್ತು ಚಾರ್ಜ್ ಶೀಟ್ ರಾಜಕೀಯ ಪ್ರೇರಿತವಾಗಿದೆ ಎಂದು ಕನ್ಹಯ್ಯ ಈಗಾಗಲೇ ಆರೋಪಿಸಿದ್ದಾರೆ.