ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್ ಹಣ ವಂಚನೆ: ಡಬ್ಲ್ಯುಸಿಡಿ ಸಚಿವಾಲಯದಿಂದ ಎಫ್ಐಆರ್ ದಾಖಲು
ಹೊಸದಿಲ್ಲಿ, ಜ. 19: ಹಣಕಾಸು ಅವ್ಯವಹಾರಗಳ ಆರೋಪದ ಹಿನ್ನೆಲೆಯಲ್ಲಿ ಶೌರ್ಯ ಪ್ರಶಸ್ತಿ ನೀಡುವ ಸರಕಾರತೇರ ಸಂಸ್ಥೆಯೊಂದರ ವಿರುದ್ಧ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ ಶುಕ್ರವಾರ ಪ್ರಥಮ ಮಾಹಿತಿ ವರದಿ ದಾಖಲಿಸಿದೆ.
ಸರಕಾರೇತರ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್ ಖರ್ಚಾಗದೆ ಉಳಿದ 2015-16ರ ರೂ. 5,44,002, 2014-15ರ ರೂ. 83,99,852 ಹಾಗೂ 2015-16ರ ರೂ. 2,19,70,197 ಅನ್ನು ಹಿಂದಿರುಗಿಸಿಲ್ಲ ಎಂದು ಸಚಿವಾಲಯ ಆರೋಪಿಸಿದೆ. ಮಧ್ಯಂತರ ತನಿಖಾ ಸಮಿತಿ ಶೋಧನೆ, ಖರ್ಚಾಗದೆ ಉಳಿದ ಬಾಕಿಯನ್ನು ಹಿಂದಿರುಗಿಸಲು ಐಸಿಸಿಡಬ್ಲು ವಿಫಲವಾಗಿರುವುದು ಹಾಗೂ ಇತರ ಕಾರಣಗಳಿಗಾಗಿ ಐಸಿಸಿಡಬ್ಲು ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಈ ಹಿಂದೆ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್ ಹೆಸರಿನ ಸರಕಾರೇತರ ಸಂಸ್ಥೆ ಶೌರ್ಯ ಪ್ರಶಸ್ತಿ ಆಯೋಜಿಸಿತ್ತು. ಈ ಸಂಸ್ಥೆಯ ಪ್ರಶಸ್ತಿ ವಿಜೇತರಿಗೆ ಭಾರತ ಸರಕಾರ ಬೆಂಬಲ ನೀಡುತ್ತಿತ್ತು. ಇತ್ತೀಚೆಗೆ ರಿಟ್ ದೂರೊಂದನ್ನು ವಿಚಾರಣೆ ನಡೆಸಿದ ದಿಲ್ಲಿ ಉಚ್ಚ ನ್ಯಾಯಾಲಯ ಐಸಿಸಿಡಬ್ಲುನ ಆರ್ಥಿಕ ಸಮಗ್ರತೆಯನ್ನು ಪ್ರಶ್ನಿಸಿತ್ತು ಎಂದು ಸಚಿವಾಲಯ ಇತ್ತೀಚೆಗಿನ ಹೇಳಿಕೆ ತಿಳಿಸಿದೆ. ಐಸಿಸಿಡಬ್ಲುವನ್ನು ವಿವಾದಗಳು ಸುತ್ತುವರಿದ ಹಿನ್ನೆಲೆಯಲ್ಲಿ ಐಸಿಸಿಡಬ್ಲುವೊಂದಿಗಿನ ಸಂಬಂಧವನ್ನು ಸಚಿವಾಲಯ ಕಡಿದುಕೊಂಡಿತ್ತು. ಪ್ರಧಾನ ಮಂತ್ರಿ ರಾಷ್ಟ್ರೀಯ ಮಕ್ಕಳ ಪ್ರಶಸ್ತಿಯ ಹೆಚ್ಚುವರಿ ಘಟಕವನ್ನಾಗಿ ಶೌರ್ಯ ಪ್ರಶಸ್ತಿಯನ್ನು ಸೇರಿಸಲು 2018ರಲ್ಲಿ ಮಕ್ಕಳಿಗೆ ರಾಷ್ಟ್ರೀಯ ಪ್ರಶಸ್ತಿಯ ಯೋಜನೆಯನ್ನು ಪರಿಷ್ಕರಿಸಿತ್ತು.