ಮಾಯಾವತಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಬಿಜೆಪಿ ಶಾಸಕಿಯಿಂದ ವಿವರಣೆ ಕೇಳಿದ ಮಹಿಳಾ ಆಯೋಗ
ಹೊಸದಿಲ್ಲಿ, ಜ.21: ಮಾಯಾವತಿ ಸ್ತ್ರೀಕುಲಕ್ಕೇ ಕಳಂಕ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರಪ್ರದೇಶದ ಬಿಜೆಪಿ ಶಾಸಕಿ ಸಾಧನಾ ಸಿಂಗ್ ತನ್ನ ಹೇಳಿಕೆಯ ಬಗ್ಗೆ ವಿವರಣೆ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್ಸಿಡಬ್ಲೂ) ಸೂಚಿಸಿದೆ.
ಮಾಯಾವತಿಗೆ ಸ್ವಾಭಿಮಾನವಿಲ್ಲ. ಈ ಹಿಂದೆ ತಮಗೆ ಕಿರುಕುಳ ನೀಡಿರುವುದನ್ನು ಮರೆತು, ಅಧಿಕಾರ ದಾಹಕ್ಕಾಗಿ ತನ್ನ ಘನತೆಯನ್ನು ಮಾರಿಕೊಂಡಿದ್ದಾರೆ. ಅಧಿಕಾರ ಮತ್ತು ಸೌಕರ್ಯಕ್ಕಾಗಿ ಆಕೆ ತನಗಾದ ಅವಮಾನವನ್ನು ಬದಿಗೆ ಸರಿಸಿದ್ದಾರೆ ಎಂದು ಸಾಧನಾ ಸಿಂಗ್ ಹೇಳಿಕೆ ನೀಡಿದ್ದರು. ಈ ರೀತಿಯ ಹೇಳಿಕೆ ಜನಪ್ರತಿನಿಧಿಗೆ ಹೇಳಿಸಿದ್ದಲ್ಲ. ಬೇಜವಾಬ್ದಾರಿಯುತ, ಅನೈತಿಕ ಹಾಗೂ ಮನನೋಯಿಸುವ ಈ ಹೇಳಿಕೆ ಖಂಡನೀಯವಾಗಿದ್ದು, ತನ್ನ ಹೇಳಿಕೆಯ ಬಗ್ಗೆ ಶಾಸಕಿಯಿಂದ ವಿವರಣೆ ಕೇಳಲಾಗಿದೆ ಎಂದು ಎನ್ಸಿಡಬ್ಲೂ ಅಧ್ಯಕ್ಷೆ ರೇಖಾ ಶರ್ಮ ಹೇಳಿದ್ದಾರೆ.
ಶಾಸಕಿಯ ಹೇಳಿಕೆಯನ್ನು ಖಂಡಿಸಿರುವ ಬಿಎಸ್ಪಿ ಈಗಾಗಲೇ ದೂರು ದಾಖಲಿಸಿದೆ. ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರೂ ಶಾಸಕಿಯ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ಮಧ್ಯೆ, ತನ್ನ ಹೇಳಿಕೆಯ ಬಗ್ಗೆ ಶಾಸಕಿ ಸಾಧನಾ ಸಿಂಗ್ ಕ್ಷಮೆ ಯಾಚಿಸಿದ್ದಾರೆ. ನನ್ನ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಮಹಿಳೆಯೊಬ್ಬರ ನೋವನ್ನು ಹಂಚಿಕೊಂಡಿದ್ದೇನೆ ಅಷ್ಟೇ ಹೊರತು ಯಾರನ್ನೂ ನೋಯಿಸುವ ಉದ್ದೇಶ ತನಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.