ಆಂಧ್ರದ ಮೀನು ಮಾರಾಟಕ್ಕೆ ನಿಷೇಧ: ಬಿಹಾರದ ಕ್ರಮಕ್ಕೆ ಚಂದ್ರಬಾಬು ನಾಯ್ಡು ಅಸಮಾಧಾನ
ಹೈದರಾಬಾದ್, ಜ.22: ಆಂಧ್ರದಿಂದ ಪೂರೈಕೆಯಾಗುತ್ತಿರುವ ಮೀನುಗಳ ಮಾರಾಟಕ್ಕೆ ನಿಷೇಧ ಹೇರಿರುವ ಬಿಹಾರ ಸರಕಾರದ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಂಧ್ರದಿಂದ ಬಿಹಾರಕ್ಕೆ ಬರುತ್ತಿರುವ ಮೀನುಗಳಲ್ಲಿ ಫಾರ್ಮಾಲಿನ್ ಅಂಶ ಹೆಚ್ಚಿದೆ ಎಂದು ಕಾರಣ ನೀಡಿ ಪಾಟ್ನ ನಗರದಲ್ಲಿ 15 ದಿನ ಇವುಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಇದನ್ನು ಖಂಡಿಸಿರುವ ನಾಯ್ಡು, ಆಂಧ್ರಪ್ರದೇಶಕ್ಕೆ ತಂತ್ರಜ್ಞರ ತಂಡವೊಂದನ್ನು ಕಳಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ಗೆ ಪತ್ರ ಬರೆದಿದ್ದಾರೆ. ರಾಜ್ಯದ ಮೀನು ಹಾಗೂ ಮೀನಿನ ಉತ್ಪನ್ನಗಳ ಪ್ರತಿಷ್ಟೆಗೆ ಹಾನಿ ಎಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಉಭಯ ರಾಜ್ಯಗಳ ನಡುವಿನ ವ್ಯಾಪಾರ ಸಂಬಂಧವನ್ನು ಮರು ಸ್ಥಾಪಿಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಆಂಧ್ರಪ್ರದೇಶದ ಹಲವೆಡೆ ಸರಕಾರಿ ಅಧಿಕಾರಿಗಳು ದಾಳಿ ನಡೆಸಿ ಮೀನಿನ ಮಾದರಿಯನ್ನು ಪರೀಕ್ಷೆ ನಡೆಸಿದ್ದು ಒಂದು ಕಡೆಯೂ ಮೀನಿನಲ್ಲಿ ಫಾರ್ಮಾಲಿನ್ ಅಂಶ ಪತ್ತೆಯಾಗಿಲ್ಲ ಎಂದು ತಿಳಿಸಿರುವ ನಾಯ್ಡು, ಗಡಿ ಭಾಗದಲ್ಲಿ ಗುಣಮಟ್ಟ ಪರೀಕ್ಷೆ ನಡೆಸುವಂತೆ ನಿತೀಶ್ ಕುಮಾರ್ಗೆ ಸಲಹೆ ನೀಡಿದ್ದಾರೆ.