ಉತ್ತರ ಪ್ರದೇಶದಲ್ಲಿ ನಿಂತ ಕಾರ್ಯಗಳು ಕಾಂಗ್ರೆಸ್ ಸರಕಾರದಿಂದ ಪುನರಾರಂಭ: ರಾಹುಲ್ ಗಾಂಧಿ
ಹೊಸದಿಲ್ಲಿ,ಜ.24: ಉತ್ತರ ಪ್ರದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸ್ಥಗಿತಗೊಳಿಸಲ್ಪಟ್ಟಿರುವ ಕಾರ್ಯಗಳು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಪುನರ್ಆರಂಭವಾಗಲಿದೆ ಎಂದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ತಿಳಿಸಿದ್ದಾರೆ.
ತನ್ನ ಸಂಸದೀಯ ಕ್ಷೇತ್ರ ಅಮೇಠಿಯ ಸಲೋನಾದಲ್ಲಿ ಜನರನ್ನುದ್ದೇಶಿಸಿ ಮಾತನಾಡುವ ವೇಳೆ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. “ನಾವು ನಮ್ಮ ಭರವಸೆ ಈಡೇರಿಸಲಿದ್ದೇವೆ. ಅಮೇಠಿಗೆ ತನ್ನ ಆಹಾರ ಪಾರ್ಕ್ ಮರುದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ನಿಮ್ಮನ್ನು ಯಾವುದೆಲ್ಲದರಿಂದ ವಂಚಿತಗೊಳಿಸಿದ್ದಾರೆಯೋ ಅವೆಲ್ಲವೂ ನಿಮಗೆ ಸಿಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ತಿಳಿಸಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೇರಿಸುವ ಉದ್ದೇಶದಿಂದ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಮಧ್ಯ ಪ್ರದೇಶದ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾರನ್ನು ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಿದ್ದೇನೆ. ಇದೀಗ ದೇಶದಲ್ಲಿ ನಿಮಗಾಗಿ ಕೆಲಸ ಮಾಡುವ ಮೂವರು ಯೋಧರಿದ್ದಾರೆ (ರಾಹುಲ್, ಪ್ರಿಯಾಂಕಾ ಮತ್ತು ಸಿಂಧಿಯಾ)” ಎಂದು ಕಾಂಗ್ರೆಸ್ ಮುಖ್ಯಸ್ಥ ತಿಳಿಸಿದ್ದಾರೆ.