ಗುಜರಾತ್: ಸೋಮನಾಥ ದೇವಸ್ಥಾನದ ಸುತ್ತಮುತ್ತ ಮಾಂಸಾಹಾರ ಮಾರಾಟಕ್ಕೆ ನಿಷೇಧ
ಗಾಂಧಿನಗರ, ಜ.26: ಗುಜರಾತ್ನ ಸೌರಾಷ್ಟ್ರದಲ್ಲಿರುವ ಸೋಮನಾಥ ದೇವಸ್ಥಾನ ಹಾಗೂ ಬನಸ್ಕಾಂತ ಜಿಲ್ಲೆಯಲ್ಲಿರುವ ಅಂಬಾಜಿ ದೇವಸ್ಥಾನದ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯನ್ನು ಸಸ್ಯಾಹಾರ ವಲಯ ಎಂದು ಮುಖ್ಯಮಂತ್ರಿ ವಿಜಯ್ ರೂಪಾನಿ ಘೋಷಿಸಿದ್ದಾರೆ.
ಈ ವಲಯದಲ್ಲಿ ಮಾಂಸಾಹಾರ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಪಾಲನ್ಪುರದಲ್ಲಿ ನಡೆದ ಸಭೆಯೊಂದರಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ. 2006ರಲ್ಲಿ ಸೋಮನಾಥ ದೇವಸ್ಥಾನವಿದ್ದ ಜುನಾಗಢ ಜಿಲ್ಲೆಯ ಜಿಲ್ಲಾಧಿಕಾರಿ ದೇವಸ್ಥಾನದ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿದ್ದರು. ಸೋಮನಾಥ ದೇವಸ್ಥಾನದ ಸುತ್ತಮುತ್ತ ಮಾಂಸಾಹಾರ ಮಾರಾಟ ನಿಷೇಧಿಸಬೇಕೆಂದು ಅಲ್ಲಿಯ ಹಿಂದೂ ಸಂಘಟನೆಗಳು ಸುದೀರ್ಘಾವಧಿಯಿಂದ ಆಗ್ರಹಿಸುತ್ತಿದ್ದವು. ಸ್ಥಳೀಯ ನಗರಪಾಲಿಕೆ ಈ ನಿಟ್ಟಿನಲ್ಲಿ 2018ರ ಎಪ್ರಿಲ್ನಲ್ಲಿ ನಿರ್ಣಯವೊಂದನ್ನು ಕೈಗೊಂಡಿತ್ತು. ದೇವಸ್ಥಾನದ ಸುತ್ತಲಿನ ಕನಿಷ್ಠ 3 ಕಿ.ಮೀ. ವ್ಯಾಪ್ತಿಯನ್ನು ಸಸ್ಯಾಹಾರ ವಲಯವೆಂದು ಘೋಷಿಸುವಂತೆ ನಿರ್ಣಯದಲ್ಲಿ ಸರಕಾರವನ್ನು ಒತ್ತಾಯಿಸಲಾಗಿತ್ತು.