ಶಿಕ್ಷಣೇತರ ಕರ್ತವ್ಯವನ್ನು ಅಧ್ಯಾಪಕರಿಗೆ ನೀಡುವಂತಿಲ್ಲ: ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ, ಜ. 27: ಶಿಕ್ಷಣ ಹಕ್ಕು (ಆರ್ಟಿಇ) ಕಾಯ್ದೆಯಿಂದ ಯಿಂದ ಹೊರಗೆ ಶಿಕ್ಷಣೇತರ ಕರ್ತವ್ಯಗಳನ್ನು ನಿರ್ವಹಿಸುವಂತೆ ಅಧ್ಯಾಪಕರನ್ನು ಕೋರಲು ಸಾಧ್ಯವಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಹೇಳಿದೆ. ಆರ್ಟಿಇ ವ್ಯಾಪ್ತಿಗಿಂತ ಹೊರಗೆ ಕರ್ತವ್ಯ ನಿರ್ವಹಿಸುವಂತೆ ಪುರಸಭೆ ಪ್ರಾಂಶುಪಾಲರು ಹಾಗೂ ಅಧ್ಯಾಪಕರಿಗೆ ಸೂಚಿಸುವಂತೆ ಇಲ್ಲ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.
ಮನೆಗಳ ಸಮೀಕ್ಷೆ ನಡೆಸುವಂತೆ ಹಾಗೂ ವಾರ್ಡ್ ಶಿಕ್ಷಣ ನೋಂದಣಿ ಸಿದ್ಧತೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿ ಪ್ರಾಂಶುಪಾಲರು ಹಾಗೂ ಅಧ್ಯಾಪಕರಿಗೆ ನಗರಸಭೆ ಜಾರಿಗೊಳಿಸಿದ ಹಲವು ಅಧಿಸೂಚನೆಗಳನ್ನು ನ್ಯಾಯಮೂರ್ತಿ ಸಿ. ಹರಿಶಂಕರ್ ತಿರಸ್ಕರಿಸಿದ್ದಾರೆ. ಶಾಲೆಯಲ್ಲಿರುವ ವಿದ್ಯಾರ್ಥಿಗಳಿಗೆ ಬ್ಯಾಂಕ್ ಖಾತೆ ಆರಂಭಿಸಲು, ಅದನ್ನು ಆಧಾರ್ ಕಾರ್ಡ್ನೊಂದಿಗೆ ಜೋಡಿಸಲು ಪ್ರಾಂಶುಪಾಲರು ಹಾಗೂ ಅಧ್ಯಾಪಕರ ನೆರವು ಕೋರುವುದನ್ನು ಪುರಸಭೆ ಸಮರ್ಥಿಸಿಕೊಳ್ಳಬಹುದು. ಆದರೆ, ಅದನ್ನು ಕಡ್ಡಾಯಗೊಳಿಸುವಂತಿಲ್ಲ ಹಾಗೂ ಅವರು ನೆರವು ನೀಡದೇ ಇದ್ದರೆ ಕ್ರಮ ಕೈಗೊಳ್ಳುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.