ಹರ್ಯಾಣದಲ್ಲಿ ಈ ಪ್ರಸಿದ್ಧ ಕ್ರಿಕೆಟಿಗನನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಬಿಜೆಪಿ?
ಲೋಕಸಭಾ ಚುನಾವಣೆ
ಚಂಡೀಗಢ, ಫೆ.7: ಮುಂದಿನ ಕೆಲವೇ ತಿಂಗಳುಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದ ರೋಹ್ಟಕ್ ಕ್ಷೇತ್ರದಿಂದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯ ಬಗ್ಗೆ ಬಿಜೆಪಿ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆ ತಯಾರಿಗಾಗಿರುವ ಪಕ್ಷದ ರಾಜ್ಯದ ಕೋರ್ ಸಮಿತಿ ಸಭೆ ಕಳೆದ ರವಿವಾರ ನಡೆದಿದ್ದಾಗ ಸೆಹ್ವಾಗ್ ಹೆಸರು ಕೇಳಿ ಬಂತು ಎಂದು ಸಭೆಯಲ್ಲಿ ಭಾಗವಹಿಸಿದ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ, ರೋಹ್ಟಕ್ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಪಕ್ಷದ ದೀಪೇಂದರ್ ಸಿಂಗ್ ಹೂಡಾ ಅವರನ್ನು ಹೇಗೆ ಸೋಲಿಸುವುದು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಾಗ ಸೆಹ್ವಾಗ್ ಹೆಸರನ್ನು ಎತ್ತಲಾಯಿತು ಎಂದು ತಿಳಿದು ಬಂದಿದೆ.
ಆದರೆ ಈ ವಿಚಾರವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್ ಬರಾಲ ನಿರಾಕರಿಸಿದ್ದಾರಲ್ಲದೆ, ಸೆಹ್ವಾಗ್ ಬಿಜೆಪಿ ಪಕ್ಷವನ್ನು ಸೇರಿರದೇ ಇರುವಾಗ ಇಂತಹ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಆದರೆ ಲೋಕಸಭಾ ಟಿಕೆಟ್ ಆಫರ್ ನೊಂದಿಗೆ ಸೆಹ್ವಾಗ್ ಅವರನ್ನು ಭೇಟಿಯಾಗುವ ಕಾರ್ಯವನ್ನು ಪಕ್ಷದ ದಿಲ್ಲಿಯ ಹಿರಿಯ ನಾಯಕರೊಬ್ಬರಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ``ಪಕ್ಷವು ಈ ಬಗ್ಗೆ ನಿರ್ಧರಿಸಿದೆ. ಒಪ್ಪಿಗೆ ನೀಡುವುದು ಅವರಿಗೆ ಬಿಟ್ಟ ವಿಚಾರ,'' ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.