ವಧುವಿನ ಕನ್ಯತ್ವ ಪರೀಕ್ಷೆ ಲೈಂಗಿಕ ಕಿರುಕುಳಕ್ಕೆ ಸಮ: ಮಹಾರಾಷ್ಟ್ರ ಸರಕಾರ
ಮುಂಬೈ, ಫೆ. 7: ವಧುವಿನ ಕನ್ಯತ್ವ ಪರೀಕ್ಷೆ ಲೈಂಗಿಕ ಕಿರುಕುಳಕ್ಕೆ ಸಮ ಹಾಗೂ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ. ರಾಜ್ಯದ ಕೆಲವು ನಿರ್ದಿಷ್ಟ ಸಮುದಾಯಗಳಲ್ಲಿ ಈ ರೀತಿಯ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ವಧು ವಿವಾಹದ ಮೊದಲು ತನ್ನ ಕನ್ಯತ್ವ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಈ ವಿಷಯದ ಕುರಿತು ಗೃಹ ಖಾತೆಯ ಸಹಾಯಕ ಸಚಿವ ರಂಜಿತ್ ಪಾಟಿಲ್ ಬುಧವಾರ ಕೆಲವು ಸಾಮಾಜಿಕ ಸಂಘಟನೆಗಳ ನಿಯೋಗವನ್ನು ಭೇಟಿಯಾಗಿದ್ದಾರೆ. ಶಿವಸೇನೆಯ ವಕ್ತಾರ ನೀಲಂ ಗೋರ್ಹೆ ಕೂಡ ಈ ನಿಯೋಗದಲ್ಲಿ ಇದ್ದರು.
‘‘ಕಾನೂನು ಹಾಗೂ ನ್ಯಾಯಾಂಗ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಕನ್ಯತ್ವ ಪರೀಕ್ಷೆಯನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸಲಾಗುವುದು. ಇದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿ ಸುತ್ತೋಲೆ ಹೊರಡಿಸಲಾಗುವುದು’’ ಎಂದು ಸಚಿವರು ತಿಳಿಸಿದ್ದಾರೆ. ಕಂಜರ್ಭಾತ್ ಸಮುದಾಯ ಹಾಗೂ ಇತರ ಕೆಲವು ಸಮುದಾಯಗಳಲ್ಲಿ ಈ ಕನ್ಯತ್ವ ಪರೀಕ್ಷೆಯ ಸಂಪ್ರದಾಯ ಅನುಸರಿಸಲಾಗುತ್ತಿದೆ. ಇದರ ವಿರುದ್ಧ ಕೆಲವು ಯುವಕರು ಆನ್ಲೈನ್ ಅಭಿಯಾನ ಆರಂಭಿಸಿದ್ದಾರೆ.