ತೀಸ್ತಾ ಸೆಟಲ್ವಾಡ್, ಜಾವೇದ್ ಆನಂದ್ಗೆ ಗುಜರಾತ್ ಹೈಕೋರ್ಟ್ ಜಾಮೀನು
ಹೊಸದಿಲ್ಲಿ, ಪೆ. 8: ಮುಂಬೈ ಮೂಲದ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸಟಲ್ವಾಡ್ ಹಾಗೂ ಅವರ ಪತಿ ಜಾವೇದ್ ಆನಂದ್ ಅವರಿಗೆ ಗುಜರಾತ್ ಉಚ್ಚ ನ್ಯಾಯಾಲಯ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕೇಂದ್ರ ಸರಕಾರದ ನಿಧಿ ದುರುಪಯೋಗಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಇವರಿಬ್ಬರು ಬಂಧನದ ಭೀತಿ ಎದುರಿಸುತ್ತಿದ್ದಾರೆ. ‘‘ಹಲವು ಅಡ್ಡಿಗಳ ಹೊರತಾಗಿಯೂ ದೂರುದಾರರಿಗೆ (ಸೆಟಲ್ವಾಡ್ ಹಾಗೂ ಆನಂದ್) ಕೊನೆಯ ಅವಕಾಶವನ್ನು ನಾನು ನೀಡುತ್ತಿದ್ದೇನೆ. ಅಗತ್ಯವಿರುವ ಸಂದರ್ಭ ಸಮನ್ಸ್ ನೀಡುವ ಹಕ್ಕನ್ನು ನಾನು ರಾಜ್ಯ ಸರಕಾರಕ್ಕೆ ಮೀಸಲಿರಿಸಲಾಗಿದೆ. ಕಸ್ಟಡಿ ವಿಚಾರಣೆಯ ಅಗತ್ಯ ಬಿದ್ದರೆ ರಾಜ್ಯ ಅವರನ್ನು ರಿಮಾಂಡ್ಗೆ ಕೋರಬಹುದು.’’ ಎಂದು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲ ಅವರು ಹೇಳಿದರು. ಒಂದು ವೇಳೆ ಅವರು ಈ ಶರತ್ತನ್ನು ಪಾಲಿಸದೇ ಇದ್ದರೆ, ಅವರ ಜಾಮೀನು ರದ್ದುಪಡಿಸುವಂತೆ ಕೋರಿ ರಾಜ್ಯ ಸರಕಾರ ಮನವಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಅಹ್ಮದಾಬಾದ್ ಡಿಟೆಕ್ಷನ್ ಆಫ್ ಕ್ರೈಮ್ ಮುಂದೆ ಫೆಬ್ರವರಿ 11ರಂದು ಹಾಜರಾಗುವಂತೆ ಅವರು ದಂಪತಿಗೆ ನ್ಯಾಯಮೂರ್ತಿ ಆದೇಶಿಸಿದ್ದಾರೆ.