ಮಾಧ್ಯಮದ ವರದಿ ದುರುದ್ದೇಶಪೂರಿತ: ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ, ಫೆ.8: ರಫೇಲ್ ವಿಮಾನ ಖರೀದಿ ಒಪ್ಪಂದದ ಮಾತುಕತೆ ಪ್ರಕ್ರಿಯೆಯಲ್ಲಿ ಪ್ರಧಾನಿಯವರ ಕಚೇರಿ ಮೂಗು ತೂರಿಸುತ್ತಿದ್ದು, ಈ ಸಮಾನಾಂತರ ಮಾತುಕತೆ ರಕ್ಷಣಾ ಸಚಿವಾಲಯ ನಡೆಸುತ್ತಿರುವ ಮಾತುಕತೆಗೆ ಅಡ್ಡಿ ಉಂಟುಮಾಡಿದೆ ಎಂದು ಅಂದಿನ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಪ್ರತಿಕ್ರಿಯಿಸಿದ್ದರು ಎಂಬ ಸುದ್ದಿಪತ್ರಿಕೆಯೊಂದರಲ್ಲಿ ಬಂದಿರುವ ವರದಿ ಸತ್ಯವಲ್ಲ. ಇದು ದುರುದ್ದೇಶಪೂರಿತ ಸುದ್ದಿ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ತಾಳ್ಮೆಯಿಂದಿರಿ, ಆತಂಕಕ್ಕೆ ಕಾರಣವಿಲ್ಲ. ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ ಎಂದು ಅಂದಿನ ರಕ್ಷಣಾ ಸಚಿವ ಪಾರಿಕ್ಕರ್ ಅಂತರ್ಸಚಿವಾಲಯ ಮಟ್ಟದ ವರದಿಯಲ್ಲಿ ತಿಳಿಸಿದ್ದರು. ಯಾವುದೇ ವಿಷಯದ ಬಗ್ಗೆ ಪ್ರಧಾನಿ ಕಚೇರಿ ಇಲಾಖೆಯಿಂದ ಮಾಹಿತಿ ಕೇಳಬಹುದು. ಇದನ್ನು ಹಸ್ತಕ್ಷೇಪ ಎನ್ನುವಂತಿಲ್ಲ. ಆದರೆ ಇದನ್ನು ಮಾಧ್ಯಮದಲ್ಲಿ ತಪ್ಪಾಗಿ ವರದಿ ಮಾಡಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.
ಆದರೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯು ಈ ಒಪ್ಪಂದದಲ್ಲಿ ಪ್ರಧಾನಿ ಕಚೇರಿ ಹಸ್ತಕ್ಷೇಪ ನಡೆಸಿದೆ ಎಂಬ ವರದಿಗೆ ಮತ್ತಷ್ಟು ಪುರಾವೆ ಒದಗಿಸಿದೆ ಎಂದು ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಹೇಳಿದ್ದಾರೆ.