"ಕ್ಲಾಸ್ 12 ಪಾಸ್" ಪ್ರಧಾನಿ ಬೇಡ: ಸುಶಿಕ್ಷಿತರನ್ನು ಚುನಾಯಿಸಿ !
ಹೊಸದಿಲ್ಲಿ, ಫೆ. 14: "ಈ ದೇಶದ ಜನ 12ನೇ ತರಗತಿ ಉತ್ತೀರ್ಣರಾದ ವ್ಯಕ್ತಿಯನ್ನು ದೇಶದ ಪ್ರಧಾನಿಯಾಗಿ ಚುನಾಯಿಸಿದ್ದಾರೆ. ಈ ವ್ಯಕ್ತಿಗೆ ತಾನು ಎಲ್ಲಿ ಸಹಿ ಮಾಡುತ್ತಿದ್ದೇನೆ ಎನ್ನುವುದೂ ಅರ್ಥವಾಗುತ್ತಿಲ್ಲ. ಆದ್ದರಿಂದ ದೇಶಕ್ಕೆ ಸುಶಿಕ್ಷಿತ ಪ್ರಧಾನಿಯೊಬ್ಬರನ್ನು ಆಯ್ಕೆ ಮಾಡಿ"
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಡೆಸಿದ ವಾಗ್ದಾಳಿಯ ಸ್ವರೂಪ ಇದು.
"ಕಳೆದ ಬಾರಿ ನೀವು 12ನೇ ತರಗತಿ ಉತ್ತೀರ್ಣರಾದವರನ್ನು ದೇಶದ ಪ್ರಧಾನಿಯಾಗಿ ಚುನಾಯಿಸಿದ್ದೀರಿ. ಈ ಬಾರಿ ಅದೇ ತಪ್ಪು ಮಾಡಬೇಡಿ; ಈ ಬಾರಿ ಸುಶಿಕ್ಷಿತರನ್ನು ಚುನಾಯಿಸಿ. ಏಕೆಂದರೆ 12ನೇ ತರಗತಿ ಉತ್ತೀರ್ಣರಾದ ವ್ಯಕ್ತಿಗೆ, ತಾನು ಎಲ್ಲಿ ಸಹಿ ಮಾಡುತ್ತಿದ್ದೇನೆ ಎನ್ನುವುದೂ ಅರ್ಥವಾಗುವುದಿಲ್ಲ" ಎಂದು ಕೇಜ್ರಿವಾಲ್ ದೆಹಲಿಯ ವಿರೋಧ ಪಕ್ಷಗಳ ರ್ಯಾಲಿಯಲ್ಲಿ ಲೇವಡಿ ಮಾಡಿದ್ದಾಗಿ ಪಿಟಿಐ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿಯವರು ಪಡೆದ ಪದವಿಯ ವಿವರ ನೀಡುವಂತೆ ಕೇಜ್ರಿವಾಲ್ ಕಳೆದ ಹಲವು ವರ್ಷಗಳಿಂದ ದೆಹಲಿ ವಿವಿಯನ್ನು ಆಗ್ರಹಿಸುತ್ತಾ ಬಂದಿದ್ದಾರೆ. ಸುಶಿಕ್ಷಿತ ಪ್ರಧಾನಿ ಬೇಕು ಎಂಬ ಆಗ್ರಹವನ್ನು ರ್ಯಾಲಿಯಲ್ಲಿ ಹಾಜರಿದ್ದ ತೆಲುಗು ದೇಶಂ ಮುಖಂಡ ಚಂದ್ರಬಾಬು ನಾಯ್ಡು ಕೂಡಾ ಬೆಂಬಲಿಸಿದರು.
"ಮುಂಬರುವ ಚುನಾವಣೆಯಲ್ಲಿ ಜನ ಮತ ಹಾಕುವ ಮುನ್ನ ಪ್ರಜ್ಞಾಪೂರ್ವಕವಾಗಿ ಯೋಚಿಸಬೇಕು. ಭಾರತದ ಪ್ರಗತಿಗೆ ಅಪೂರ್ವ ಅವಕಾಶಗಳಿವೆ. ಆದ್ದರಿಂದ ಸುಶಿಕ್ಷಿತ ಪ್ರಧಾನಿಯೊಬ್ಬರು ದೇಶವನ್ನು ಮುನ್ನಡೆಸಬೇಕು. ಭಾರತಕ್ಕೆ ಪ್ರತಿಯೊಬ್ಬರನ್ನೂ ಹತ್ತಿಕ್ಕಿ ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನವನ್ನು ನಾಶಪಡಿಸುವ ವ್ಯಕ್ತಿ ಬೇಡ" ಎಂದು ಅವರು ಹೇಳಿದರು.