ರಾಹುಲ್ ಗಾಂಧಿಗೆ ಮುತ್ತಿಟ್ಟ ಕಾಂಗ್ರೆಸ್ ಕಾರ್ಯಕರ್ತೆ.. !
ಗಾಂಧಿನಗರ , ಫೆ.14: ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತೆಯೊಬ್ಬರು ವೇದಿಕೆಯಲ್ಲಿ ಅಧ್ಯಕ್ಷ ರಾಹುಲ್ ಗಾಂಧಿಗೆ ಮುತ್ತಿಟ್ಟ ಘಟನೆ ಗುಜರಾತ್ ನ ವಲ್ಸಾದ್ ನಲ್ಲಿ ಇಂದು ನಡೆದಿದೆ.
ಪಕ್ಷದ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಗೌರವಿಸಲು ದೊಡ್ಡ ಹಾರವೊಂದನ್ನು ಹಿಡಿದುಕೊಂಡು ಆಗಮಿಸಿದ ಕಾರ್ಯಕರ್ತೆಯರ ಪೈಕಿ ಒಬ್ಬಾಕೆ ರಾಹುಲ್ ಗಾಂಧಿ ಅವರನ್ನು ಬರಸೆಳೆದುಕೊಂಡು ಅವರ ಗಲ್ಲಕ್ಕೆ ಮುತ್ತಿಟ್ಟರು ಎನ್ನಲಾಗಿದೆ. ಬಳಿಕ ರಾಹುಲ್ ಗೆ ಹಾರಾರ್ಪಣೆಗೈದು ಕಾಂಗ್ರೆಸ್ ಕಾರ್ಯಕರ್ತೆಯರು ನಿರ್ಗಮಿಸಿದರು.. ಆದರೆ ರಾಹುಲ್ ಗಾಂಧಿ ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಕಾಂಗ್ರೆಸ್ ಕಾರ್ಯಕರ್ತೆ ಸೂರತ್ ನ ಕಾಶ್ಮೀರಾಬೆನ್ ಅವರು ರಾಹುಲ್ ಗಾಂಧಿಗೆ ಮುತ್ತಿಟ್ಟವರು. 60ರ ಹರೆಯದ ಕಾಶ್ಮೀರಾಬೆನ್ ತಾನು ಮುತ್ತಿಟ್ಟ ಹಿನ್ನೆಲೆಯಲ್ಲಿ ಬೇರೆ ಅರ್ಥ ಕಲ್ಪಿಸುವುದು ಬೇಡ. ಅವರು ನನಗೆ ಸಹೋದರ ಇದ್ದಂತೆ. ತಾನು 47 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಎಂದು ಹೇಳಿದ್ದಾರೆ.
ಪ್ರಧಾನಿ ಮಂತ್ರಿ ನರೆಂದ್ರ ಮೋದಿ ತವರು ಗುಜರಾತ್ ಗೆ 2017ರ ಚುನಾವಣೆಯ ಬಳಿಕ ಮೊದಲ ಬಾರಿ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಅಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಯಕರಾಗಿ ಮುನ್ನಡೆಸಿ ಬಿಜೆಪಿಗೆ ನಡುಕವನ್ನುಂಟು ಮಾಡಿದ್ದರು. 182 ಸ್ಥಾನಗಳ ಪೈಕಿ 99 ಸ್ಥಾನಗಳನ್ನು ಜಯಿಸಿ ಬಿಜೆಪಿ ಮತ್ತೆ ಅಧಿಕಾರಕ್ಕೇರಿತ್ತು. ಕಾಂಗ್ರೆಸ್ 80 ಸ್ಥಾನಗಳನ್ನು ಪಡೆದಿತ್ತು. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 61 ಸ್ಥಾನ ಗೆದ್ದುಕೊಂಡಿತ್ತು.
ಲಾಲ್ಡುಂಗ್ರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ತಯಾರಿಗೆ ಚಾಲನೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಇಲ್ಲಿ ಪ್ರಚಾರ ಆರಂಭಿಸಿದರೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಎನ್ನುವುದು ಪಕ್ಷದ ನಾಯಕರ ನಂಬಿಕೆ. 1980ರಲ್ಲಿ ಇಂದಿರಾಗಾಂಧಿ, 1984ರಲ್ಲಿ ರಾಜೀವ್ ಗಾಂಧಿ ಮತ್ತು 2004ರಲ್ಲಿ ಸೋನಿಯಾ ಗಾಂಧಿ ಚುನಾವಣೆಗೆ ಪ್ರಚಾರ ಆರಂಭಿಸಿದ್ದರು. ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ದಾಖಲಿಸಿತ್ತು.