ಮಿದುಳಿಗೆ ರಕ್ತಪೂರೈಕೆಯಲ್ಲಿ ಕೊರತೆ: ಅಣ್ಣಾ ಹಝಾರೆ ಆಸ್ಪತ್ರೆಗೆ ದಾಖಲು
ಅಹ್ಮದ್ ನಗರ,ಫೆ.14: ಮಿದುಳಿಗೆ ರಕ್ತ ಪೂರೈಕೆಯಲ್ಲಿ ಕೊರತೆಯಿಂದಾಗಿ ನಿಶ್ಶಕ್ತಿ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ(81) ಅವರನ್ನು ಗುರುವಾರ ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಲೆಗಣ ಸಿದ್ಧಿ ಗ್ರಾಮದಲ್ಲಿ ವಾಸವಾಗಿರುವ ಹಝಾರೆ ಬೆಳಿಗ್ಗೆ ಆರೋಗ್ಯ ಸಮಸ್ಯೆಗಳ ಬಗ್ಗೆ ದೂರಿಕೊಂಡ ಬಳಿಕ ಅವರನ್ನು ಅಹ್ಮದ್ನಗರಕ್ಕೆ ಕರೆದೊಯ್ದು ಎಂಆರ್ಐ ಸ್ಕಾನ್ ಮಾಡಿಸಿ ವೈದ್ಯರ ಸಲಹೆಯಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಸಹಾಯಕ ಶ್ಯಾಮ ಅಸಾವಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಹಝಾರೆ ಕಳೆದೆರಡು ದಿನಗಳಿಂದ ನರಶಾಸ್ತ್ರೀಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದರು.
ಲೋಕಪಾಲ ಮತ್ತು ಲೋಕಾಯುಕ್ತ ನೇಮಕ,ಕೃಷಿಕರ ಸಮಸ್ಯೆಗೆ ಪರಿಹಾರ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜ.30ರಿಂದ ಅನಿರ್ದಿಷ್ಟಾವಧಿ ನಿರಶನವನ್ನು ಆರಂಭಿಸಿದ್ದ ಹಝಾರೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಭರವಸೆಯ ಬಳಿಕ ಫೆ.5ರಂದು ಅದನ್ನು ಅಂತ್ಯಗೊಳಿಸಿದ್ದರು.
Next Story