ಪುಲ್ವಾಮ: ನಾಗರಿಕ ವಾಹನ ಬಿಟ್ಟದ್ದು ದುಬಾರಿಯಾಯಿತೇ?
ಹೊಸದಿಲ್ಲಿ, ಫೆ.15: ಜಮ್ಮು-ಶ್ರೀನಗರ ಹೆದ್ದಾರಿಯ ಬೆಂಗಾವಲು ಮಾರ್ಗದಲ್ಲಿ ಸಿಆರ್ಪಿಎಫ್ನ ರಸ್ತೆ ತೆರವು ಗುಂಪು ಐಇಡಿ ತೆರವುಗೊಳಿಸುವುದು, ಉಗ್ರರು ಗ್ರೆನೇಡ್ ಅಥವಾ ಗುಂಡಿನ ದಾಳಿ ನಡೆಸುವ ಸಂಭಾವ್ಯ ಸ್ಥಳಗಳಲ್ಲಿ ಯೋಧರ ನಿಯೋಜನೆ ಸೇರಿದಂತೆ ಗುರುವಾರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ಆದರೆ ಈ ಹೆದ್ದಾರಿಯಲ್ಲಿ ನಾಗರಿಕ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟದ್ದು ವಿಧ್ವಂಸಕವಾಗಿ ಪರಿಣಮಿಸಿತು.
ನಾಗರಿಕರಿಗೆ ಒದಗಿಸಿದ್ದ ಸ್ವಾತಂತ್ರ್ಯವನ್ನೇ ದುರ್ಬಳಕೆ ಮಾಡಿಕೊಂಡ ಜೆಇಎಂ ಆತ್ಮಾಹುತಿ ದಾಳಿಕೋರ ಆದಿಲ್ ಅಹ್ಮದ್, ಅಕ್ಕಪಕ್ಕದ ಹಳ್ಳಿಗಳಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸರ್ವೀಸ್ ರಸ್ತೆಯಲ್ಲೇ ಭಾರಿ ಪ್ರಮಾಣದ ಸ್ಫೋಟಕಗಳನ್ನು ಸಾಗಿಸಿ ಸಿಆರ್ಪಿಎಫ್ ಬಸ್ಸಿಗೆ ಢಿಕ್ಕಿ ಹೊಡೆಸಿದ್ದಾನೆ ಎಂದು ಹಿರಿಯ ಸಿಆರ್ಪಿಎಫ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಿಆರ್ಪಿಎಫ್ನ 2,547 ಯೋಧರು ಹಾಗೂ ಅಧಿಕಾರಿಗಳನ್ನು ಎರಡು ತುಕಡಿಗಳಲ್ಲಿ ವಿಂಗಡಿಸಿ 78 ವಾಹನಗಳ ಮೂಲಕ ಜಮ್ಮುವಿನಿಂದ ದಕ್ಷಿಣ ಕಾಶ್ಮೀರಕ್ಕೆ ಕರೆದೊಯ್ಯಲಾಗುತ್ತಿತ್ತು. ಹೆದ್ದಾರಿಯನ್ನು ಆರು ದಿನಗಳಿಂದ ಮುಚ್ಚಲಾಗಿತ್ತು. ಆದರೆ ರಜೆ ಹಾಗೂ ತರಬೇತಿಯಿಂದ ಜಮ್ಮುವಿಗೆ ಯೋಧರು ಆಗಮಿಸಿದ್ದ ಹಿನ್ನೆಲೆಯಲ್ಲಿ ಗುರುವಾರದ ತುಕಡಿಗಳು ಸಾಮಾನ್ಯಕ್ಕಿಂತ ದೊಡ್ಡ ಪ್ರಮಾಣದ್ದಾಗಿದ್ದವು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಂಭಾವ್ಯ ಐಇಡಿ ದಾಳಿಗಳ ಬಗ್ಗೆ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗ ಫೆಬ್ರವರಿ 8ರಂದು ನೀಡಿದ್ದ ಮಾಹಿತಿ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಸಿಆರ್ಪಿಎಫ್ ಮಹಾ ನಿರೀಕ್ಷಕ ಝುಲ್ಫಿಕರ್ ಹಸನ್ ಹೇಳಿದ್ದಾರೆ.
ಪಕ್ಕದ ರಸ್ತೆಯಿಂದ ಕಾರು ಹೆದ್ದಾರಿಗೆ ಬಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಇಷ್ಟೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಈ ಭೀಕರ ದಾಳಿ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಬಾರಿ ಉಗ್ರರು ಸಂಪೂರ್ಣ ಭಿನ್ನವಾದ ಕಾರ್ಯತಂತ್ರ ಅನುಸರಿಸಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.