40ಕ್ಕೇರಿದ ಸಾವಿನ ಸಂಖ್ಯೆ,: ನ್ಯಾಯಾಂಗ ತನಿಖೆಗೆ ಆದೇಶ
ಪುಲ್ವಾಮ ಉಗ್ರದಾಳಿ ಪ್ರಕರಣ
ಹೊಸದಿಲ್ಲಿ, ಫೆ. 15: ಹೊಸದಿಲ್ಲಿಯಲ್ಲಿರುವ ಸಿಆರ್ಪಿಎಫ್ನ ಕೇಂದ್ರ ಕಚೇರಿ ಸಂಪೂರ್ಣ ನ್ಯಾಯಾಂಗ ತನಿಖೆಗೆ ಆದೇಶ ನೀಡಿರುವ ನಡುವೆ ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಸಿಆರ್ಪಿಎಫ್ನ ಬಸ್ಸಿನ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟ ಯೋಧರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.
ಸಿಆರ್ಪಿಎಫ್ ಯೋಧರನ್ನು ಕೊಂಡೊಯ್ಯುತ್ತಿದ್ದ ಬಸ್ಸಿಗೆ ಪುಲ್ವಾಮಾ ಜಿಲ್ಲೆಯಲ್ಲಿ ಜೈಶೆ ಮುಹಮ್ಮದ್ ಉಗ್ರ ಸಂಘಟನೆಯ ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ್ದ ಕಾರನ್ನು ಢಿಕ್ಕಿ ಹೊಡೆಸಿ ಸ್ಫೋಟ ನಡೆಸಿದ್ದ. ಈ ಘಟನೆಯಲ್ಲಿ ಒಟ್ಟು 40 ಯೋಧರು ಮೃತಪಟ್ಟಿದ್ದಾರೆ. ಹಲವು ಯೋಧರು ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
38 ಮಂದಿ ಯೋಧರನ್ನು ಗುರುತಿಸಲಾಗಿದೆ. ಎರಡು ಮೃತದೇಹಗಳ ವಿಧಿವಿಜ್ಞಾನ ಹಾಗೂ ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ದಾಳಿಯ ಹಿನ್ನೆಲೆಯಲ್ಲಿ ರಾಜ್ಯದ ಕಾಶ್ಮೀರ ಕಣಿವೆ ಹಾಗೂ ಇತರ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸಿಆರ್ಪಿಎಫ್ ನಿರ್ದೇಶನ ನೀಡಿದೆ ಹಾಗೂ ಸಂಪೂರ್ಣವಾಗಿ ಸಿದ್ಧವಾಗಿರುವಂತೆ ತನ್ನ ಘಟಕಗಳಿಗೆ ಸೂಚಿಸಿದೆ.