ಭಯೋತ್ಪಾದಕ ಶಕ್ತಿಯೊಂದಿಗೆ ರಾಜಿ ಇಲ್ಲ: ಮನಮೋಹನ್ ಸಿಂಗ್
ಹೊಸದಿಲ್ಲಿ, ಫೆ. 15: ಭಯೋತ್ಪಾದಕ ಶಕ್ತಿಯೊಂದಿಗೆ ಭಾರತ ಎಂದಿಗೂ ರಾಜಿ ಮಾಡಿಕೊಳ್ಳಲಾರದು. ಈ ಪಿಡುಗನ್ನು ಸಂಘಟಿತವಾಗಿ ನಿಗ್ರಹಿಸಲಾಗುವುದು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಭಯೋತ್ಪಾದನೆಯನ್ನು ಖಂಡಿಸುವಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಘಟನೆಯಲ್ಲಿ ಹುತಾತ್ಮರಾದ ಹಾಗೂ ಗಾಯಗೊಂಡ ಯೋಧರ ಕುಟುಂಬಕ್ಕೆ ತಿಳಿಸಲು ಬಯಸುತ್ತೇವೆ ಎಂದು ಮನಮೋಹನ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿ, ಇದು ವಿವಾದದ ವಿಷಯಗಳನ್ನು ಎತ್ತುವ ದಿನವಲ್ಲ. ನಮ್ಮ ಯೋಧರು, ಅವರ ಕುಟುಂಬಕ್ಕೆ ಹೃದಯ ತುಂಬಿದ ಸಂತಾಪವನ್ನು ಸೂಚಿಸುವ ಪಾತ್ರವನ್ನು ನಾವು ಇಂದು ನಿರ್ವಹಿಸಬೇಕು. ಉಗ್ರ ನಿಗ್ರಹ ಕ್ರಮಗಳಿಗೆ ಬೆಂಬಲ ನೀಡಲು ಈ ದೇಶವನ್ನು ಸಂಘಟಿಸಲು ಅಗತ್ಯವಾದ ಎಲ್ಲವನ್ನೂ ನಾವು ಮಾಡಲಿದ್ದೇವೆ ಎಂದರು.
ಕಾಂಗ್ರೆಸ್ನ ಹಿರಿಯ ನಾಯಕರಾದ ಗುಲಾಮ್ ನಬಿ ಆಝಾದ್, ಎ.ಕೆ. ಆ್ಯಂಟನಿ ಉಪಸ್ಥಿತರಿದ್ದರು.
Next Story