ಹುತಾತ್ಮ ಸಿಆರ್ ಪಿಎಫ್ ಯೋಧನೊಂದಿಗೆ ಮಾತನಾಡುತ್ತಿದ್ದ ಪತ್ನಿಗೆ ಕೇಳಿಸಿತ್ತು ಸ್ಫೋಟದ ಸದ್ದು…
ಕಾನ್ಪುರ, ಫೆ.16: ಪುಲ್ವಾಮಾದಲ್ಲಿ ಗುರುವಾರ ನಡೆದ ಉಗ್ರರ ಆತ್ಮಹತ್ಯಾ ದಾಳಿಯಲ್ಲಿ ಮೃತಪಟ್ಟ ಸಿಆರ್ ಪಿಎಫ್ ಯೋಧ ಪ್ರದೀಪ್ ಸಿಂಗ್ ಯಾದವ್, ಕೊನೆಯ ಬಾರಿ ತಮ್ಮ ಪತ್ನಿ ಜತೆ ದೂರವಾಣಿಯಲ್ಲಿ ಮಾತನಾಡಿದ್ದರು ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ. ಸಿಆರ್ ಪಿಎಫ್ ಸಿಬ್ಬಂದಿಯನ್ನು ಒಯ್ಯುತ್ತಿದ್ದ ಬಸ್ಸಿಗೆ ಆತ್ಮಹತ್ಯಾ ಬಾಂಬರ್ ಎಸ್ಯುವಿ ಢಿಕ್ಕಿ ಹೊಡೆಸಿದಾಗ ಯಾದವ್ ತಮ್ಮ ಪತ್ನಿ ಜತೆ ಮೊಬೈಲ್ ಸಂಭಾಷಣೆ ಮಾಡುತ್ತಿದ್ದರು.
"ನಾನು ಪತಿ ಜತೆಗೆ ಮಾತನಾಡುತ್ತಿದ್ದಾಗ ಕಿವಿಯೇ ಕಿವುಡಾಗುವಂತಹ ಭೀಕರ ಸದ್ದು ಆ ಕಡೆಯಿಂದ ಕೇಳಿಬಂತು. ಬಳಿಕ ಕೆಲ ಸೆಕೆಂಡ್ ಗಳ ಕಾಲ ನೀರವ ಮೌನ. ಬಳಿಕ ಕರೆ ಕಡಿತಗೊಂಡಿತು. ಏನೋ ಅಹಿತಕರ ಘಟನೆ ಆಗಿರಬೇಕು ಎಂಬ ಅನುಮಾನ ಬಂದು ಹಲವು ಬಾರಿ ಕರೆ ಮಾಡಲು ಪ್ರಯತ್ನ ಮಾಡಿದೆ. ಆದರೆ ಆ ವೇಳೆಗೆ ಎಲ್ಲವೂ ಮುಗಿದಿತ್ತು" ಎಂದು ಕನೌಜ್ ಜಿಲ್ಲೆಯ ಸುಖಸೇನಪುರದ ನೀರಜ್ ಘಟನೆಯನ್ನು ವಿವರಿಸಿದರು.
"ಬಳಿಕ ಸಿಆರ್ಪಿಎಫ್ ನಿಯಂತ್ರಣ ಕೊಠಡಿಯಿಂದ ಕರೆ ಬಂತು. ಪತಿ ಸ್ಫೋಟದಲ್ಲಿ ಮೃತಪಟ್ಟಿರುವ ಮಾಹಿತಿ ನೀಡಿದರು" ಎಂದು ಅವರು ಹೇಳಿದರು. ಪುಲ್ವಾಮಾದಲ್ಲಿ ಈ ಘಟನೆ ನಡೆದಾಗ ಪ್ರದೀಪ್ ಪತ್ನಿ ಇಬ್ಬರು ಮಕ್ಕಳ ಜತೆಗೆ ಕಲ್ಯಾಣ್ ಪುರದ ಬರಸಿರೋಹಿ ಗ್ರಾಮದ ತವರುಮನೆಯಲ್ಲಿದ್ದರು. ತಕ್ಷಣ ಪತಿಯ ಸ್ವಗ್ರಾಮಕ್ಕೆ ತೆರಳಿದರು. ಶನಿವಾರ ಸಂಜೆ ವೇಳೆಗೆ ಹುತಾತ್ಮ ಯೋಧರ ಕಳೇಬರ ಗ್ರಾಮಕ್ಕೆ ಬರುವ ನಿರೀಕ್ಷೆ ಇದೆ.
ಇವರಿಗೆ ಸುಪ್ರಿಯಾ (10) ಮತ್ತು ಸೋನಾ (2) ಎಂಬ ಇಬ್ಬರು ಮಕ್ಖಳಿದ್ದಾರೆ. "ಸೋನಾ ಎಂದರೆ ಪ್ರದೀಪ್ಗೆ ಅಚ್ಚುಮೆಚ್ಚು. ಗುರುವಾರ ಕೂಡಾ 10 ನಿಮಿಷ ಆಕೆ ಜತೆ ಮಾತನಾಡಿದ್ದರು" ಎಂದು ನೀರಜ್ ನೆನಪಿಸಿಕೊಂಡರು.