ಆಗಸ್ಟಾ ವೆಸ್ಟ್ಲ್ಯಾಂಡ್ ಹಗರಣ: ಕ್ರಿಶ್ಚಿಯನ್ ಮಿಶೆಲ್ ಜಾಮೀನು ಅರ್ಜಿ ತಿರಸ್ಕೃತ
ಹೊಸದಿಲ್ಲಿ, ಫೆ.16: ಆಗಸ್ಟ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಆರೋಪಿ, ಬ್ರಿಟನ್ನ ಉದ್ಯಮಿ ಕ್ರಿಶ್ಚಿಯನ್ ಮಿಶೆಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದಿಲ್ಲಿಯ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ.
ಇದೇ ಪ್ರಕರಣದ ಮತ್ತೋರ್ವ ಸಹ ಆರೋಪಿ ಉದ್ಯಮಿ ರಾಜೀವ್ ಸಕ್ಸೇನಾಗೆ ಆರೋಗ್ಯದ ಕಾರಣಕ್ಕೆ 7 ದಿನಗಳ ಮಧ್ಯಂತರ ಜಾಮೀನು ಮಂಜೂರಾಗಿದ್ದು ತಲಾ 5 ಲಕ್ಷ ರೂ. ಮೊತ್ತದ ಎರಡು ಬಾಂಡ್ ಒದಗಿಸುವಂತೆ
ಸಕ್ಸೇನಾಗೆ ನ್ಯಾಯಾಲಯ ತಿಳಿಸಿದೆ. ಸಕ್ಸೇನಾ ಪ್ರಕರಣದ ವಿಚಾರಣೆ ಫೆಬ್ರವರಿ 22ರಂದು ನಡೆಯಲಿದೆ. ಇದೀಗ ನ್ಯಾಯಾಂಗ ಕಸ್ಟಡಿಯಲ್ಲಿರುವ ಮಿಶೆಲ್ ರನ್ನು ಡಿಸೆಂಬರ್ 4ರಂದು ದುಬೈಯಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ದುಬೈಯಿಂದ ಓಡಿಹೋಗಿ ಭಾರತಕ್ಕೆ ಬಂದಿದ್ದ ರಾಜಕುಮಾರಿ ಶೇಖಾ ಲತೀಫಾರನ್ನು ಭಾರತ ಹಸ್ತಾಂತರಿಸಿದರೆ ಮಿಶೆಲ್ ರನ್ನು ಭಾರತಕ್ಕೆ ಹಸ್ತಾಂತರಿಸುವ ಒಪ್ಪಂದದ ಅನ್ವಯ ಮಿಶೆಲ್ ರನ್ನು ಗಡೀಪಾರು ಮಾಡಲಾಗಿದ್ದು ಇದನ್ನು ಪ್ರಶ್ನಿಸಿ ವಿಶ್ವಸಂಸ್ಥೆಗೆ ಮನವಿ ಮಾಡಿಕೊಳ್ಳುವುದಾಗಿ ಮಿಶೆಲ್ ಕುಟುಂಬದವರು ಬೆದರಿಕೆ ಹಾಕಿದ್ದಾರೆ.