ನೆಲಬಾಂಬ್ ಸ್ಫೋಟಗೊಂಡು ಮೃತಪಟ್ಟ ಸೇನಾಧಿಕಾರಿಯ ವಿವಾಹ ಮುಂದಿನ ತಿಂಗಳು ನಡೆಯಬೇಕಿತ್ತು
ಡೆಹ್ರಾಡೂನ್, ಫೆ.17: ಮೇಜರ್ ಚಿತ್ರೇಶ್ ಬಿಷ್ತ್ (31) ಡೆಹ್ರಾಡೂನ್ನಲ್ಲಿರುವ ತಮ್ಮ ಮನೆಗೆ ಮುಂದಿನ ತಿಂಗಳು ವಿವಾಹಕ್ಕಾಗಿ ಆಗಮಿಸಬೇಕಿತ್ತು. ಆದರೆ ಒಂದು ತಿಂಗಳು ಮುಂಚೆ ಅವರ ಪಾರ್ಥಿವ ಶರೀರ ಶವಪೆಟ್ಟಿಗೆಯಲ್ಲಿ ಹುಟ್ಟೂರಿಗೆ ಬಂದಿದೆ!
ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಎಂಬಲ್ಲಿ ವಾಸ್ತವ ನಿಯಂತ್ರಣ ರೇಖೆಯ ಬಳಿ ನೆಲಬಾಂಬ್ ನಿಷ್ಕ್ರಿಯಗೊಳಿಸುತ್ತಿದ್ದ ವೇಳೆ ಅವರು ಮೃತಪಟ್ಟಿದ್ದರು.
ಸೇನೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಷ್ಟ್, ತಮ್ಮ ಪೋಷಕರು ಹಾಗೂ ಅಣ್ಣನನ್ನು ಅಗಲಿದ್ದಾರೆ. ಇವರ ತಂದೆ ಎಸ್.ಎಸ್. ಬಿಷ್ತ್, ನಿವೃತ್ತ ಪೊಲೀಸ್ ಅಧಿಕಾರಿ. ಅಣ್ಣ ವಿದೇಶದಲ್ಲಿ ನೆಲೆಸಿದ್ದಾರೆ.
"ಆತ ನಮ್ಮ ಕಿರಿಯ ಮಗ. ಫೋನ್ನಲ್ಲಿ ನಾವು ಪ್ರತಿದಿನ ಆತನ ಜತೆ ಮಾತನಾಡುತ್ತಿದ್ದೆವು. ಆದರೆ ಇಂದು ಮಾತನಾಡಲು ಸಾಧ್ಯವಾಗಿರಲಿಲ್ಲ. ಈ ದುರ್ಘಟನೆ ನಡೆದು ಹೋಯಿತು. ಆತನ ವಿವಾಹ ಮುಂದಿನ ತಿಂಗಳು ನಿಗದಿಯಾಗಿತ್ತು" ಎಂದು ಕಣ್ಣೀರು ಒತ್ತರಿಸಿ ಬರುತ್ತಿದ್ದ ಬಿಷ್ತ್ ಹೇಳಿದರು.
ಒಂದು ನೆಲಬಾಂಬ್ ನಿಷ್ಕ್ರಿಯಗೊಳಿಸಿ ಮತ್ತೊಂದನ್ನು ನಿಷ್ಕ್ರಿಯಗೊಳಿಸುವ ಯತ್ನದಲ್ಲಿದ್ದಾಗ ಅದು ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಬಿಷ್ತ್ ಜತೆಗಿದ್ದ ಮತ್ತೊಬ್ಬ ಯೋಧ ಕೂಡಾ ಗಾಯಗೊಂಡಿದ್ದರು.