ಶಾರದಾ ಚಿಟ್ ಫಂಡ್ ಹಗರಣ: ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ
ಹೊಸದಿಲ್ಲಿ, ಫೆ. 20: ಪಶ್ಚಿಮಬಂಗಾಳದ ಪೊಲೀಸ್ ಅಧಿಕಾರಿಗಳು ನಡೆಸುತ್ತಿರುವ ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದ ತನ್ನ ತನಿಖೆಗೆ ಅಡ್ಡಿ ಉಂಟಾಗುತ್ತಿದೆ ಎಂದು ಆರೋಪಿಸಿ ಸಿಬಿಐ ಸಲ್ಲಿಸಿದ ಮನವಿಯನ್ನು ವಿಚಾರಣೆ ನಡೆಸಲು ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಬುಧವಾರ ನಿರಾಕರಿಸಿದ್ದಾರೆ.
ಈ ಪ್ರಕರಣದ ವಿಚಾರಣೆಯಲ್ಲಿ ಪೀಠದ ಭಾಗವಾಗಲು ಓರ್ವ ನ್ಯಾಯಮೂರ್ತಿ ನಿರಾಕರಿಸುತ್ತಿದ್ದಾರೆ ಎಂದು ಹೇಳಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ, ನ್ಯಾಯಮೂರ್ತಿ ರಾವ್ ಹಾಗೂ ಸಂಜೀವ್ ಖನ್ನನ್ ಅವರನ್ನು ಒಳಗೊಂಡ ಪೀಠ ವಿಚಾರಣೆಯನ್ನು ಮುಂದೂಡಿದೆ.
ತಾನು ರಾಜ್ಯದ ವಕೀಲರಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದೆ. ಆದುದರಿಂದ ನನಗೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ರಾವ್ ಹೇಳಿದ್ದಾರೆ. ಈಗ ಪೀಠ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ರಾವ್ ಇರದ ಪೀಠದ ಮುಂದೆ ವಿಚಾರಣೆಗೆ ಫೆಬ್ರವರಿ 27ಕ್ಕೆ ಮುಂದೂಡಿದೆ.
ಸಿಬಿಐ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮಬಂಗಾಳದ ಮುಖ್ಯ ಕಾರ್ಯದರ್ಶಿ ಮಲಯ ಕುಮಾರ್ ಡೆ, ಡಿಜಿಪಿ ವಿರೇಂದ್ರ ಕುಮಾರ್ ಹಾಗೂ ಆಗಿನ ಕೋಲ್ಕತ್ತಾದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಸುಪ್ರೀಂ ಕೋರ್ಟ್ನಲ್ಲಿ ಫೆಬ್ರವರಿ 18ರಂದು ಅಫಿದಾವಿತ್ ಸಲ್ಲಿಸಿದ್ದರು ಹಾಗೂ ನಿಶ್ಯರ್ತು ಕ್ಷಮೆ ಕೋರಿದ್ದರು.