ಪುಲ್ವಾಮಾ ದಾಳಿ ನಡೆದ ಕೆಲ ಗಂಟೆಗಳಲ್ಲೇ ಫೋಟೊಶೂಟ್ ನಲ್ಲಿ ಪಾಲ್ಗೊಂಡ ಮೋದಿ
ಫೋಟೊ ಬಿಡುಗಡೆಗೊಳಿಸಿದ ಕಾಂಗ್ರೆಸ್
ಹೊಸದಿಲ್ಲಿ, ಫೆ.21: "ಮೋದಿಯವರಿಗೆ ಅಧಿಕಾರದ ದಾಹವೇ ಸೈನಿಕರಿಗಿಂತ ಮಹತ್ವದ್ದಾಗಿತ್ತು" ಎಂದು ಕಾಂಗ್ರೆಸ್ ಆಪಾದಿಸಿದೆ. ಪುಲ್ವಾಮ ಘಟನೆ ಹಿನ್ನೆಲೆಯಲ್ಲಿ ಸರ್ಕಾರವನ್ನು ಟೀಕಿಸಿರುವ ಕಾಂಗ್ರೆಸ್ ಪಕ್ಷ, ಫೆಬ್ರವರಿ 14ರಂದು ಪುಲ್ವಾಮ ಘಟನೆ ನಡೆದ ಬಳಿಕ ಕೆಲ ಗಂಟೆಗಳವರೆಗೆ ಮೋದಿ ಚಲನಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದರು ಎಂದು ಗಂಭೀರ ಆರೋಪ ಮಾಡಿದೆ.
ಜೈಶ್ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ 40 ಮಂದಿ ಸಿಆರ್ಪಿಎಫ್ ಯೋಧರು ಬಲಿಯಾಗಿದ್ದರು.
ಯೋಧರ ಸಾವಿಗೆ ಇಡೀ ದೇಶ ಶೋಕ ಆಚರಿಸುತ್ತಿದ್ದರೆ, ಮೋದಿಯವರು ಕೊರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಬಳಿಕ ಮೊಸಳೆಗಳನ್ನು ನೋಡಲು ದೋಣಿ ವಿಹಾರ ಕೈಗೊಂಡರು ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಅಂದು ಸಂಜೆ 6:30ರವರೆಗೆ ಚಿತ್ರೀಕರಣ ಮುಂದುವರಿದಿತ್ತು. 6.45ಕ್ಕೆ ಚಹಾ ಹಾಗೂ ಲಘು ಉಪಹಾರ ಸೇವಿಸಿದರು, ಈ ಘಟನೆ ಬೆಳಕಿಗೆ ಬಂದ ನಾಲ್ಕು ಗಂಟೆ ಬಳಿಕ ಕೂಡಾ, ಮೋದಿ ತಮ್ಮ ಸ್ವಂತ ಬ್ರಾಂಡಿಂಗ್, ಫೋಟೊ ಶೂಟ್ ನಲ್ಲಿ ನಿರತರಾಗಿದ್ದರು ಎಂದು ಆಪಾದಿಸಿದೆ.
ಮೋದಿ ಸರ್ಕಾರ ರಾಷ್ಟ್ರೀಯ ಶೋಕದ ಅವಧಿಯಲ್ಲಿ ಘೋಷಿಸದಿರುವುದು ಇನ್ನೂ ನೋವಿನ ಸಂಗತಿ. ಹಾಗೊಂದು ವೇಳೆ ಘೋಷಿಸಿದ್ದರೆ ಮೋದಿ ಉದ್ಘಾಟಿಸಬೇಕಿದ್ದ ಎಲ್ಲ ಕಾರ್ಯಕ್ರಮಗಳು ಹಾಗೂ ರಾಜಕೀಯ ರ್ಯಾಲಿಗಳನ್ನು ರದ್ದುಪಡಿಸಬೇಕಿತ್ತು ಎಂದು ಕಾಂಗ್ರೆಸ್ ಹೇಳಿದೆ. ಯೋಧರಿಗೆ ಅಂತಿಮ ನಮನ ಸಲ್ಲಿಸುವ ಸಲುವಾಗಿ ದಿಲ್ಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಕೂಡಾ ತಡವಾಗಿ ಬಂದರು. ಏಕೆಂದರೆ ಅವರು ಝಾನ್ಸಿಯಲ್ಲಿ ರಾಜಕೀಯದಲ್ಲಿ ತಲ್ಲೀನರಾಗಿದ್ದರು ಎಂದು ವಾಗ್ದಾಳಿ ನಡೆಸಿದೆ.