ಶತ್ರುಘ್ನ ಸಿನ್ಹಾಗೆ ಪಕ್ಷದಿಂದ ಟಿಕೆಟ್ ಅನುಮಾನ: ಬಿಜೆಪಿ ನಾಯಕ
ಪಾಟ್ನಾ,ಫೆ.21: ಕೇಂದ್ರದ ಎನ್ಡಿಎ ಸರಕಾರ ಮತ್ತು ಪ್ರಧಾನಿ ಮೋದಿಯ ಟೀಕಾಕಾರಲ್ಲಿ ಓರ್ವರಾಗಿರುವ ಸಂಸದ ಶತ್ರುಘ್ನ ಸಿನ್ಹಾರಿಗೆ ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದಿಂದ ಅವರಿಗೆ ಟಕೆಟ್ ನೀಡುವುದು ಅನುಮಾನ ಎಂದು ಬಿಹಾರ ಬಿಜೆಪಿ ಅಧ್ಯಕ್ಷ ನಿತ್ಯಾನಂದ ರಾಯ್ ತಿಳಿಸಿದ್ದಾರೆ.
ಎನ್ಡಿಎ ಅಧಿಕಾರಕ್ಕೆ ಬಂದಂದಿನಿಂದ ಸರಕಾರವನ್ನು ಟೀಕಿಸುತ್ತಲೇ ಬಂದಿರುವ ಸಿನ್ಹಾ ರವಿವಾರ ಪಾಟ್ನಾ ಮೆಟ್ರೊ ರೈಲು ಯೋಜನೆ ಆರಂಭಿಸಿರುವುದಕ್ಕಾಗಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದರು. ಸಿನ್ಹಾ ಅವರ ಟ್ವೀಟ್ಗೆ ಅಬಾರಿಯಾಗಿದ್ದೇನೆ ಎಂದು ತಿಳಿಸಿದ ರಾಯ್, ಪಕ್ಷವನ್ನು ತೊರೆದು ನಂತರ ವಾಪಸ್ ಮರಳಿದರೆ ಅವರಿಗೆ ಟಿಕೆಟ್ ಸಿಗುವುದು ಎಂದು ಯಾರಾದರೂ ಭಾವಿಸಿದರೆ ಅದು ತಪ್ಪು ಎಂದು ಸ್ಪಷ್ಟಪಡಿಸಿದ್ದಾರೆ.
ಜನರು ಮತ್ತು ದೇಶದ ಬಗ್ಗೆ ಬದ್ಧತೆಯ ನೀತಿಯ ಆಧಾರದಲ್ಲಿ ಬಿಜೆಪಿ ಚುನಾವಣಾ ಟಿಕೆಟ್ ನೀಡುತ್ತದೆ. ಆದರೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಅಮಿತ್ ಶಾ ಜೊತೆ ನಿಲ್ಲಲು ಎಲ್ಲರನ್ನೂ ಸ್ವಾಗತಿಸಲಾಗುವುದು ಎಂದು ರಾಯ್ ತಿಳಿಸಿದ್ದಾರೆ. ಮೋದಿ ನಾಯಕತ್ವದ ಮೇಲೆ ನಂಬಿಕೆಯಿರುವವರನ್ನು ಪ್ರೀತಿಯಿಂದ ನಡೆಸಿಕೊಳ್ಳಲಾಗುವುದು. ಆದರೆ ಪಕ್ಷದಲ್ಲೇ ಇದ್ದು, ನಾಯಕತ್ವವನ್ನು ಟೀಕಿಸಿ ನಂತರ ಯೂಟರ್ನ್ ಹೊಡೆಯುವವರಿಗೆ ಟಿಕೆಟ್ ನೀಡುವ ಬಗ್ಗೆ ಯಾವುದೇ ಖಾತ್ರಿಯಿಲ್ಲ ಎಂದು ರಾಯ್ ತಿಳಿಸಿದ್ದಾರೆ.