ಕಾಶ್ಮೀರಿಗಳ ಮೇಲಿನ ಹಲ್ಲೆಯ ಬಗ್ಗೆ ಪ್ರಧಾನಿ ಯಾಕೆ ಮಾತನಾಡುತ್ತಿಲ್ಲ: ಉಮರ್ ಅಬ್ದುಲ್ಲಾ
ಶ್ರೀನಗರ, ಫೆ. 21: ಕಳೆದ ವಾರ ನಡೆದ ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ದೇಶದ ವಿವಿಧ ಭಾಗಗಳಲ್ಲಿ ನಡೆದ ‘ವ್ಯವಸ್ಥಿತ ದಾಳಿ’ ಬಗ್ಗೆ ನ್ಯಾಶನಲ್ ಕಾನ್ಫರೆನ್ಸ್ನ ನಾಯಕ ಉಮರ್ ಅಬ್ದುಲ್ಲಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ, “ನಾನು ರಾಜನೀತಿಜ್ಞರನ್ನು ಎದುರು ನೋಡುತ್ತಿದ್ದೇನೆ. ಆದರೆ, ರಾಜಕಾರಣಿಗಳು ಮಾತ್ರ ಸಿಗುತ್ತಿದ್ದಾರೆ” ಎಂದರು. “ದೇಶಕ್ಕೆ ಬಿಜೆಪಿಯ ಪರ್ಯಾಯ ಅಗತ್ಯತೆ ಇದೆ. ಬಿಜೆಪಿಯ ಬಿ ತಂಡ ಅಗತ್ಯ ಇಲ್ಲ” ಎಂದರು.
“ನಾವು ಬಿಜೆಪಿಯಿಂದ ಅತಿಯಾಗಿ ನಿರೀಕ್ಷಿಸುತ್ತಿಲ್ಲ. ಆದರೆ, ನಾವು ಪ್ರಧಾನಿ ಅವರಿಂದ ನಿರೀಕ್ಷಿಸುತ್ತಿದ್ದೇವೆ. ಅವರು ರಾಜಕೀಯವನ್ನು ಬದಿಗಿರಿಸಿ ಏನಾದರೂ ಹೇಳುತ್ತಾರೆ” ಎಂಬ ಬಗ್ಗೆ ನಮಗೆ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಭಯೋತ್ಪಾದಕ ದಾಳಿಯ ಬಳಿಕ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಬೆದರಿಕೆ ಹಾಗೂ ದಾಳಿಗಳಿಂದ ಸ್ವಂತ ಊರಿಗೆ ಹಿಂದಿರುಗುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವಂತೆ ಅವರು ಜಮ್ಮು ಹಾಗೂ ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಆಗ್ರಹಿಸಿದರು.