ಪುಲ್ವಾಮ ದಾಳಿಯ ಮಾಹಿತಿ ಪ್ರಧಾನಿಗೆ ತಡವಾಗಿ ತಲುಪಿತ್ತು ಎಂದ ಸರಕಾರಿ ಮೂಲಗಳು: ವರದಿ
ಮೋದಿ ಪುಲ್ವಾಮ ಘಟನೆ ಬಳಿಕ ಫೋಟೊಶೂಟ್ ನಲ್ಲಿದ್ದರು ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ
ಹೊಸದಿಲ್ಲಿ, ಫೆ.21: ಪುಲ್ವಾಮ ಭಯೋತ್ಪಾದಕ ದಾಳಿಯ ಬಗ್ಗೆ ಪ್ರಧಾನಿಗೆ ಮಾಹಿತಿ ತಲುಪುವಾಗ ತಡವಾಗಿತ್ತು ಎಂದು ಸರಕಾರಿ ಮೂಲಗಳು ತಿಳಿಸಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.
ಪುಲ್ವಾಮ ದಾಳಿಗೆ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದ್ದರೆ ಪ್ರಧಾನಿ ಮೋದಿ ದಾಳಿಯ ಕೆಲ ಗಂಟೆಗಳ ನಂತರ ಫೋಟೊಶೂಟ್ ನಲ್ಲಿ ಪಾಲ್ಗೊಂಡಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು. ಕಾಂಗ್ರೆಸ್ ನ ಈ ಆರೋಪಗಳಿಗೆ ಸರಕಾರಿ ಮೂಲಗಳು ಪ್ರತಿಕ್ರಿಯಿಸಿದ್ದು, ಕೆಟ್ಟ ಹವಾಮಾನ ಮತ್ತು ನೆಟ್ ವರ್ಕ್ ಸಮಸ್ಯೆಯಿಂದ ದಾಳಿಯ ಬಗ್ಗೆ ಪ್ರಧಾನಿಗೆ ಮಾಹಿತಿ ತಲುಪುವಾಗ 25 ನಿಮಿಷಗಳು ತಡವಾಗಿತ್ತು ಎಂದು ತಿಳಿಸಿದೆ.
ಪ್ರಧಾನಿ ಮೋದಿ ಬೆಳಗ್ಗೆ 7 ಗಂಟೆಗೆ ಡೆಹ್ರಾಡೂನ್ ಗೆ ತಲುಪಿದ್ದರು. ಆದರೆ ಕೆಟ್ಟ ಹವಾಮಾನದ ಕಾರಣ ನಾಲ್ಕು ಗಂಟೆಗಳ ಕಾಲ ಅಲ್ಲಿರಬೇಕಾಯಿತು. 11:15ರ ಸುಮಾರಿಗೆ ಜಿಮ್ ಕಾರ್ಬೆಟ್ ಪಾರ್ಕ್ ತಲುಪಿದ್ದ ಪ್ರಧಾನಿ ಟೈಗರ್ ಸಫಾರಿಗೆ ಚಾಲನೆ ನೀಡಿದ್ದರು.
ದಾಳಿಯ ಮಾಹಿತಿ ಲಭಿಸಿದ ನಂತರ ಪ್ರಧಾನಿ ಮೋದಿ ಏನನ್ನೂ ತಿಂದಿಲ್ಲ. ನಂತರ ಅವರು ರಾಮ್ ನಗರದಿಂದ ಬರೇಲಿಗೆ ತೆರಳಿದರು. ರಾತ್ರಿ ದಿಲ್ಲಿ ತಲುಪಿದ್ದರು ಎಂದು ಸರಕಾರಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.