ಸಿಆರ್ ಪಿಎಫ್ ಯೋಧರಿಗೆ ದೇಣಿಗೆ ನೀಡಲು ಚಿನ್ನದ ಬಳೆಯನ್ನು ಮಾರಿದ ಮಹಿಳೆ
ಬರೇಲಿ (ಉತ್ತರ ಪ್ರದೇಶ), ಫೆ.22: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾಧ ಯೋಧರ ಕುಟುಂಬಗಳಿಗೆ ಪರಿಹಾರ ನೀಡುವ ನಿಧಿಗೆ ರಾಷ್ಟ್ರಾದ್ಯಂತ ಜನಸಾಮಾನ್ಯರು ಕೂಡಾ ಕೊಡುಗೆ ನೀಡುತ್ತಿದ್ದು, ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಶಾಲಾ ಪ್ರಾಂಶುಪಾಲೆಯೊಬ್ಬರು ದೇಣಿಗೆ ನೀಡುವ ಸಲುವಾಗಿ ತಮ್ಮ ಚಿನ್ನದ ಬಳೆಗಳನ್ನೇ ಮಾರಾಟ ಮಾಡಿದ ಬಗ್ಗೆ ವರದಿಯಾಗಿದೆ.
ಸಿಆರ್ ಪಿಎಫ್ ಯೋಧರ ಕುಟುಂಬಗಳಿಗೆ ನೆರವಾಗುವ ಸಲುವಾಗಿ ಇಲ್ಲಿನ ಖಾಸಗಿ ಶಾಲೆಯ ಪ್ರಾಚಾರ್ಯರಾದ ಕಿರಣ್ ಝಗ್ವಾಲ್ ಎಂಬವರು ಆಭರಣಗಳನ್ನು ಮಾರಿ ಅದರಿಂದ ಬಂದ 1,38,387 ರೂಪಾಯಿಗಳನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಸಮರ್ಪಿಸಿದ್ದಾರೆ.
"ಯೋಧರ ಪತ್ನಿಯರು ಅಳುವುದನ್ನು ನೋಡಿದಾಗ, ಅವರಿಗಾಗಿ ಏನು ಮಾಡಬಹುದು ಎಂದು ಯೋಚಿಸಿದೆ. ನನ್ನ ಚಿನ್ನದ ಬಳೆಗಳಿಂದ ಏನು ಪ್ರಯೋಜನ ಎಂದು ಯೋಚಿಸಿ, ಅದನ್ನು ಮಾರಾಟ ಮಾಡಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಲು ನಿರ್ಧರಿಸಿದೆ. ಇದು ನನ್ನ ತಂದೆ ಉಡುಗೊರೆಯಾಗಿ ನೀಡಿದ ಬಳೆಗಳು" ಎಂದು ಅವರು ಹೇಳಿದ್ದಾರೆ.
ಸಾಹಸಿ ಯೋಧರ ಕುಟುಂಬಗಳಿಗೆ ನೆರವಾಗಲು ಜನ ಮುಂದೆ ಬರುವಂತೆ ಅವರು ಇತರರಿಗೂ ಮನವಿ ಮಾಡಿದ್ದಾರೆ.