ರಸ್ತೆ ಅಪಘಾತ: ಎಐಎಡಿಎಂಕೆ ಸಂಸದ ರಾಜೇಂದ್ರನ್ ಮೃತ್ಯು
ಚೆನ್ನೈ, ಫೆ.23: ವಿಲ್ಲಾಪುರಂನ ಟಿಂಡಿವನಮ್ ನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಮಿಳುನಾಡಿನ ಎಐಎಡಿಎಂಕೆ ಸಂಸದ ಎಸ್. ರಾಜೇಂದ್ರನ್ (63) ಮೃತಪಟ್ಟಿದ್ದಾರೆ.
ರಾಜೇಂದ್ರನ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ 4.35ರ ಸುಮಾರಿಗೆ ತೈಲಪುರಂನಲ್ಲಿ ಔತಣಕೂಟವೊಂದರಲ್ಲಿ ರಾಜೇಂದ್ರನ್ ಭಾಗವಹಿಸಿ ತನ್ನ ಮನೆಗೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಉಂಟಾಗಿದ್ದು, ಸಂಸದ ರಾಜೆಂದ್ರನ್ ಅವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತು ಎಂದು ತಿಳಿದುಬಂದಿದೆ.
ಅಪಘಾತವಾದ ತಕ್ಷಣ ಸ್ಥಳೀಯರು ಕಾರಿನಲ್ಲಿದ್ದ ಸಂಸದ ರಾಜೆಂದ್ರನ್ ಸೇರಿದಂತೆ ನಾಲ್ವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಆದರೆ ಸಂಸದ ರಾಜೇಂದ್ರನ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಜೇಂದ್ರನ್ 2014ರಲ್ಲಿ ವಿಲ್ಲಾಪುರಂ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ್ದರು.
ತಮಿಳು ಸಾಹಿತ್ಯದಲ್ಲಿ ಪದವಿ ಪಡೆದಿರುವ ರಾಜೇಂದ್ರನ್ ಅವರು ರಾಸಾಯನಿಕ ಮತ್ತು ರಸಗೊಬ್ಬರ ಸ್ಥಾಯಿ ಸಮಿತಿ ,ನಾಗರಿಕ ವಿಮಾನಯಾನ ಖಾತೆಯ ಕನ್ಸಲ್ಟೇಟಿವ್ ಕಮಿಟಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.