ಹಲ್ಲೆಗೊಳಗಾದ ಕಾಶ್ಮೀರಿ ವಿದ್ಯಾರ್ಥಿಗಳು ಪ್ರಧಾನಮಂತ್ರಿ ವಿಶೇಷ ಯೋಜನೆಯ ಫಲಾನುಭವಿಗಳು
ಪುಲ್ವಾಮ ಭಯೋತ್ಪಾದಕ ದಾಳಿ
ಹೊಸದಿಲ್ಲಿ, ಫೆ.23: ಪುಲ್ವಾಮ ಉಗ್ರರ ದಾಳಿಯ ಬಳಿಕ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಕಾಶ್ಮೀರಿ ಪ್ರಧಾನಮಂತ್ರಿಗಳ ವಿಶೇಷ ವಿದ್ಯಾರ್ಥಿ ಯೋಜನೆ (ಪಿಎಂಎಸ್ಎಸ್ಎಸ್) ಯೋಜನೆಯಡಿ ಸೌಲಭ್ಯ ಪಡೆದವರು ಎಂಬ ಅಂಶ ಬೆಳಕಿಗೆ ಬಂದಿದೆ.
ಈ ಪ್ರತಿಭೆ ಆಧಾರಿತ ಯೋಜನೆಯಡಿ ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳಿಗೆ ದೇಶದ ಇತರೆಡೆಗಳ ಕಾಲೇಜುಗಳು, ಶಿಕ್ಷಣ ಸಂಸ್ಥೆ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಕಲ್ಪಿಸಿ ಅವರ ಬೋಧನಾ ಶುಲ್ಕ ಮತ್ತು ಊಟದ ಶುಲ್ಕವನ್ನು ಸರ್ಕಾರ ಭರಿಸುತ್ತದೆ.
ಪಾಣಿಪತ್ನ ಗೀತಾ ಎಂಜಿನಿಯರಿಂಗ್ ಕಾಲೇಜು ಮತ್ತು ಮೊರಾದಾಬಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಇತ್ತೀಚೆಗೆ ಪ್ರತಿಭಟನೆ ನಡೆದಿತ್ತು. ಇದರ ಜತೆಗೆ ರೂರ್ಕಿಯ ಕ್ವಾಂಟಮ್ ವಿವಿ, ಮೀರತ್ ನ ಭಾರತ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಗುರುಗಾಂವ್ ನ ಶ್ರೀ ಗುರು ಗೋವಿಂದ್ ಸಿಂಗ್ ಟ್ರೈಸೆಂಟಿನರಿ ಯುನಿವರ್ಸಿಟಿಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳನ್ನು ಆಕ್ಷೇಪಾರ್ಹ ಪೋಸ್ಟ್ ಮಾಡಿದ ಆರೋಪದಲ್ಲಿ ಡಿಬಾರ್ ಮಾಡಲಾಗಿದೆ. ಇವರೆಲ್ಲರೂ ಪಿಎಂಎಸ್ಎಸ್ಎಸ್ ಯೋಜನೆಯಡಿ ಪ್ರವೇಶ ಪಡೆವರು ಎನ್ನುವುದು ಇಂಡಿಯನ್ ಎಕ್ಸ್ಪ್ರೆಸ್ ನಡೆಸಿದ ದಾಖಲೆಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ.