ಪುಲ್ವಾಮ ದಾಳಿಯ ಬಗ್ಗೆ ಅನುಚಿತ ಪ್ರತಿಕ್ರಿಯೆ: ತ್ರಿಪುರದ ವ್ಯಕ್ತಿಯ ವಿರುದ್ಧ ದೇಶದ್ರೋಹ ಪ್ರಕರಣ
ಅಗರ್ತಲ, ಫೆ.24: ಪುಲ್ವಾಮದಲ್ಲಿ ಫೆ.14ರಂದು ನಡೆದಿದ್ದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ರಾಷ್ಟ್ರವಿರೋಧಿ ವೀಡಿಯೊ ಪೋಸ್ಟ್ ಮಾಡಿದ್ದ ತ್ರಿಪುರದ ವ್ಯಕ್ತಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಪ್ರಮೇಶ್ ದೆಬ್ಬರ್ಮ ಎಂದು ಗುರುತಿಸಲಾಗಿದ್ದು ಆತನನ್ನು ಶನಿವಾರ ಮೈಸೂರಿನಲ್ಲಿ ಪೊಲೀಸರು ಬಂಧಿಸಿ ತ್ರಿಪುರಾಕ್ಕೆ ಕರೆದೊಯ್ದಿದ್ದಾರೆ. ಆಕ್ಷೇಪಾರ್ಹ ವೀಡಿಯೊವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಪ್ರಮೇಶ್ ದೆಬ್ಬರ್ಮ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಆತನನ್ನು ಬಂಧಿಸಲು ಮನೆಗೆ ತೆರಳಿದ್ದಾಗ ಆತ ಕರ್ನಾಟಕದ ಮೈಸೂರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಆತನನ್ನು ಶನಿವಾರ ಬಂಧಿಸಲಾಗಿದೆ. ಪುಲ್ವಾಮ ದಾಳಿಯ ನಂತರ ತ್ರಿಪುರದಲ್ಲಿ ದೇಶದ್ರೋಹ ಆರೋಪ ದಾಖಲಾಗಿರುವ ಎರಡನೇ ಪ್ರಕರಣ ಇದಾಗಿದೆ.
ಕಳೆದ ವಾರ ‘ಇಂಡೀಜಿನಸ್ ನ್ಯಾಷನಲಿಸ್ಟ್ ಪಾರ್ಟಿ ಆಫ್ ತ್ರಿಪುರ’ದ ಪ್ರಧಾನ ಕಾರ್ಯದರ್ಶಿ ಜಗದೀಶ್ ದೆಬ್ಬರ್ಮ, ‘ಇಂಡೀಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ’ದ ಮುಖಂಡ ಅಘೋರೆ ದೆಬ್ಬರ್ಮ ಹಾಗೂ ‘ಪೀಪಲ್ಸ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್’ನ ಮುಖಂಡ ಅಂತೋನಿ ದೆಬ್ಬರ್ಮ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಇವರು ಪಾಲ್ಗೊಂಡಿದ್ದ ರ್ಯಾಲಿಯಲ್ಲಿ ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.