ಅರ್ನಬ್ ಗೋಸ್ವಾಮಿ, ಇತರ ಮೂವರಿಗೆ ಜಾಮೀನು ರಹಿತ ಬಂಧನಾದೇಶ ಜಾರಿ
ಶ್ರೀನಗರ, ಫೆ. 25: “ರಿಪಬ್ಲಿಕ್ ಟಿವಿ” ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಇತರ ಮೂವರಿಗೆ ಶ್ರೀನಗರದ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಶನಿವಾರ ಜಾಮೀನು ರಹಿತ ಬಂಧನಾದೇಶ ಹೊರಡಿಸಿದ್ದಾರೆ.
ಮಾರ್ಚ್ 23ರಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸಂಬಂಧಿತ ಎಸ್ಎಸ್ಪಿಗೆ ನ್ಯಾಯಾಲಯ ನಿರ್ದೇಶಿಸಿದೆ.
ತನ್ನ ವಿರುದ್ಧ ಹಗರಣ ದ ಸುದ್ದಿಯನ್ನು ರಿಪಬ್ಲಿಕ್ ಟಿ.ವಿ. ಪ್ರಸಾರ ಮಾಡಿದೆ ಎಂದು ಆರೋಪಿಸಿ ಈ ಹಿಂದೆ ಪಿಡಿಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ನಯೀಮ್ ಅಖ್ತರ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.
ಆರೋಪಿಯ ವಿಚಾರಣೆ ನಡೆಸಬೇಕು ಹಾಗೂ ಕಾನೂನು ನಿಯಮಾನುಸಾರ ಶಿಕ್ಷೆ ನೀಡಬೇಕು ಎಂದು ಅವರು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಅರ್ನಬ್ ಗೋಸ್ವಾಮಿ, ಆದಿತ್ಯರಾಜ್ ಕೌಲ್, ಝೀನತ್ ಝೆಶಾನ್ ಫಝಿಲ್, ಸಕ್ಲಾ ಭಟ್ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಿಜೆಎಂ ನ್ಯಾಯಾಲಯ ಡಿಸೆಂಬರ್ 27ರಂದು ರಿಪಬ್ಲಿಕ್ ನ್ಯೂಸ್ ಚಾನೆಲ್ನ ಆಡಳಿತ ನಿರ್ದೇಶಕರಿಗೆ ಸೂಚಿಸಿತ್ತು. ಆದರೆ, ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.