ರಫೇಲ್ ಒಪ್ಪಂದದ ಕಡತಗಳು ನಾಪತ್ತೆಯಾಗಿಲ್ಲ, ಬಚ್ಚಿಡಲಾಗಿದೆ: ರಾಹುಲ್ ಗಾಂಧಿ
ಹೊಸದಿಲ್ಲಿ, ಮಾ.7: ರಫೇಲ್ ಒಪ್ಪಂದದ ಕಡತಗಳು ನಾಪತ್ತೆಯಾಗಿಲ್ಲ. ಕಡತಗಳನ್ನು ಬಚ್ಚಿಡಲಾಗಿದೆ. ದಾಖಲೆ ಕಳೆದು ಹೋಗಿದ್ದರೆ ನಮ್ಮ ಆರೋಪ ಸತ್ಯ . ದಾಖಲೆ ಕಳೆದು ಹೋಗಿದೆ ಎಂಬ ಒಂದು ಹೊಸ ಸಾಲು ಕೇಂದ್ರ ಸರಕಾರಕ್ಕೆ ಸಿಕ್ಕಿದೆ. ಉಳಿದ ಎಲ್ಲವೂ ಕಳೆದು ಹೋಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ರಫೇಲ್ ಹಗರಣಕ್ಕೆ ಸಂಬಂಧಿಸಿ ಪ್ರಧಾನ ಮಂತ್ರಿ ವಿರುದ್ಧ ಯಾಕೆ ತನಿಖೆ ನಡೆಸಿಲ್ಲ. ಮೋದಿ ರಫೇಲ್ ಒಪ್ಪಂದದ ಬೈಪಾಸ್ ಸರ್ಜರಿ ಮಾಡಿದ್ದಾರೆ ಎಂದು ಆರೋಪಿಸಿದರು.
ರಫೇಲ್ ಹಗರಣದಲ್ಲಿ ಮೋದಿಯನ್ನು ರಕ್ಷಿಸಲು ಎಲ್ಲ ಪ್ರಯತ್ನ ನಡೆದಿದೆ. ದಾಖಲೆಯಲ್ಲಿ ಯಾರ ಹೆಸರು ಇದೆಯೋ ಅವರ ತನಿಖೆಯಾಗಲಿ. ರಫೇಲ್ ಡೀಲ್ ನಲ್ಲಿ ಪ್ರಧಾನಿ ಮೋದಿ ಪಾತ್ರ ಸ್ಪಷ್ಟವಾಗಿದೆ. ಹಗರಣಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಹಾಗೂ ಪ್ರಧಾನಿ ಕಾರ್ಯಾಲಯದ ತನಿಖೆಯಾಗಲಿ ಎಂದು ಆಗ್ರಹಿಸಿದರು.
ರಫೇಲ್ ಒಪ್ಪಂದವನ್ನು ಪ್ರಧಾನಿ ಮೋದಿ ವಿಳಂಬ ಮಾಡಿದ್ದಾರೆ. ಅನಿಲ್ ಅಂಬಾನಿಗೆ ಹಣ ನೀಡುವುದಕ್ಕಾಗಿ ವಿಳಂಬ ಮಾಡಲಾಗಿದೆ. ರಫೇಲ್ ಡೀಲ್ ನಲ್ಲಿ 30 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ. ಹಣ ಎಲ್ಲಿ ಹೋಯಿತೆಂಬ ಸತ್ಯ ಶೀಘ್ರದಲ್ಲೇ ಹೊರಬರಲಿದೆ ಎಂದರು.
ಪುಲ್ವಾಮದಲ್ಲಿ ಹುತಾತ್ಮರಾದ ಯೋಧರ ಕುಟುಂಬಸ್ಥರು ಏರ್ ಸ್ಟ್ರೈಕ್ ನಲ್ಲಿ ಸತ್ತವರ ಶವ ನೋಡಲು ಕಾಯುತ್ತಿದ್ದಾರೆ ಎಂದು ಹೇಳಿದರು.