ತನಿಖೆಯಲ್ಲಿ ಉತ್ಕೃಷ್ಟತೆ: 9 ಸಿಬಿಐ ಅಧಿಕಾರಿಗಳಿಗೆ ಪದಕ
ಹೊಸದಿಲ್ಲಿ, ಮಾ. 7: ತನಿಖೆಯಲ್ಲಿನ ಉತ್ಕೃಷ್ಟತೆಗಾಗಿ ಸಿಬಿಐಯ 9 ಮಂದಿ ಅಧಿಕಾರಿಗಳಿಗೆ 2018ನೇ ಸಾಲಿನ ಪದಕ ನೀಡಿ ಗೌರವಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ಮೊದಲ ಬಾರಿಗೆ ಈ ಪದಕವನ್ನು ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೃಹ ಸಚಿವಾಲಯ ಮೊದಲ ಬಾರಿಗೆ ಸ್ಥಾಪಿಸಿದ ಈ ಪದಕವನ್ನು ಸಿಬಿಐಯಿಂದ 9 ಮಂದಿ ಅಧಿಕಾರಿಗಳು ಸಹಿತ ದೇಶಾದ್ಯಂತ ಒಟ್ಟು 101 ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಸಿಬಿಐ ಪದಕ ವಿಜೇತರಲ್ಲಿ ಪೊಲೀಸ್ ಉಪ ಅಧೀಕ್ಷಕ ವೆಲ್ಲಾದುರೈ ನವರಾಜು, ಸೀಮಾ ಪಹುಜಾ, ರೋಶನ್ ಲಾಲ್ ಯಾದವ್, ರಾಮಾವತಾರ್ ಯಾದವ್, ರಾಜೇಶ್ ಕುಮಾರ್, ಕೆ. ಪ್ರದೀಪ್ ಕುಮಾರ್ ಹಾಗೂ ಇನ್ಸ್ಪೆಕ್ಟರ್ ಚಂದ್ರಕಾಂತ್ ವಿಠ್ಠಲ್ ಪೂಜಾರಿ, ಗಿರೀಶ್ ಕುಮಾರ್ ಪ್ರಧಾನ್ ಹಾಗೂ ರಮಣ ಕುಮಾರ್ ಶುಕ್ಲಾ ಅವರು ಒಳಗೊಂಡಿದ್ದಾರೆ.
ದೇಶದಲ್ಲಿರುವ ಸಿಬಿಐ ಹಾಗೂ ರಾಜ್ಯ ಪೊಲೀಸ್ನಲ್ಲಿ ಅಪರಾಧದ ತನಿಖೆಯಲ್ಲಿ ವೃತ್ತಿಪರ, ಅತ್ಯುಚ್ಛ ಗುಣಮಟ್ಟ ಉತ್ತೇಜಿಸುವ ಪೊಲೀಸ್ ಅಧಿಕಾರಿಗಳನ್ನು ಗೌರವಿಸುವುದು ಹಾಗೂ ಪೊಲೀಸ್ ಸಂಘಟನೆಯಲ್ಲಿ ತನಿಖಾಧಿಕಾರಿಗಳ ಶ್ರೇಷ್ಠತೆ ಗುರುತಿಸುವ ಉದ್ದೇಶದಿಂದ ಈ ಪದಕ ಸ್ಥಾಪಿಸಲಾಗಿದೆ ಎಂದು ಸಿಬಿಐ ವಕ್ತಾರ ತಿಳಿಸಿದ್ದಾರೆ.