ಪತನಗೊಂಡ ಪಾಕ್ ವಿಮಾನದ ಪೈಲೆಟ್ ಗೆ ಸ್ಥಳೀಯರು ಥಳಿಸಿದ್ದರು: ಸಚಿವೆ ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ, ಮಾ.13: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮಿಗ್ -21 ಹೊಡೆದುರಳಿಸಿದ ಪಾಕಿಸ್ತಾನದ ಎಫ್-16 ವಿಮಾನದ ಪೈಲೆಟ್ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಫೆ.27ರಂದು ಸಂಭವಿಸಿದ ಈ ಘಟನೆಯ ವೇಳೆ ಪತನಗೊಂಡ ಪಾಕಿಸ್ತಾನದ ವಿಮಾನದ ಪೈಲೆಟ್ ಪಾಕ್ ನೆಲದಲ್ಲಿ ಇಳಿಯುತ್ತಿದ್ದಂತೆ ಆತನ ಮೇಲೆ ಸ್ಥಳೀಯರು ಚೆನ್ನಾಗಿ ಥಳಿಸಿದ್ದರು. ಗಂಭೀರ ಗಾಯಗೊಂಡಿದ್ದ ಪೈಲೆಟ್ ನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಸಾಧ್ಯತೆ ಇದೆ. ಭಾರತದ ಸೇನೆಗೆ ಆತನ ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಮಾತ್ರ ಈ ವಿಚಾರವನ್ನು ನಿರಾಕರಿಸಿದೆ. ಅದು ತನ್ನ ಎಫ್ -16, ಅಥವಾ ಪೈಲೆಟ್ ನ್ನು ಕಳೆದುಕೊಂಡಿರುವುದನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲೂ ಇದೇ ಹೇಳಿಕೆಯನ್ನು ನೀಡಿತ್ತು. ಇದೀಗ ಮತ್ತೆ ಅದು ನಿರಾಕರಣೆಯ ಹೇಳಿಕೆಯನ್ನಷ್ಟೇ ನೀಡುತ್ತಿದೆ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ.
ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಪಾಕ್ ನಲ್ಲಿ ಮಾನಸಿಕವಾಗಿ ಹಿಂಸೆ ನೀಡಲಾಗಿತ್ತು. ಅವರು ಕಠಿಣ ಪರಿಸ್ಥಿತಿಯಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.