ಅಯೋಧ್ಯೆ ವಿವಾದ: ಸುಪ್ರೀಂ ನಿಯೋಜಿತ ಸಂಧಾನ ಸಮಿತಿ ಮುಂದೆ ಹಾಜರಾದ ಕಕ್ಷಿಗಾರರು
ಫೈಝಾಬಾದ್, ಮಾ. 13: ರಾಮಜನ್ಮ ಭೂಮಿ-ಬಾಬರಿ ಮಸೀದಿ ಒಡೆತನ ವಿವಾದಕ್ಕೆ ಸಂಬಂಧಿಸಿ 25 ಮಂದಿ ಕಕ್ಷಿಗಾರರು ತಮ್ಮ ವಕೀಲರೊಂದಿಗೆ ಬುಧವಾರ ಸುಪ್ರೀಂ ಕೋರ್ಟ್ ನಿಯೋಜಿತ ಸಂಧಾನ ಸಮಿತಿ ಮುಂದೆ ಹಾಜರಾದರು.
ಸಮಿತಿಯ ಪರವಾಗಿ ಫೈಝಾಬಾದ್ ಆಡಳಿತ 25 ಮಂದಿ ಕಕ್ಷಿಗಾರರಿಗೆ ನೋಟಿಸು ಜಾರಿ ಮಾಡಿತ್ತು.
ಫೈಝಾಬಾದ್ನ ಅವಧ್ ವಿಶ್ವವಿದ್ಯಾನಿಲಯದಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆ ನಡೆಯಲಿದೆ. ಸಂಧಾನ ನಡೆಯುವ ಸಂದರ್ಭ ಯಾರೊಬ್ಬರಿಗೂ ಈ ಪ್ರದೇಶಕ್ಕೆ ಪ್ರವೇಶಿಸಲು ಅವಕಾಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯದ ಆವರಣದಲ್ಲಿ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಫೈಝಾಬಾದ್ನ ದಂಡಾಧಿಕಾರಿ ಅನುಜ್ ಕುಮಾರ್ ಝಾ ಹೇಳಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ, ಹಿರಿಯ ನ್ಯಾಯವಾದಿ ಶ್ರೀರಾಮ್ ಪಂಚು ಹಾಗೂ ಧಾರ್ಮಿಕ ಗುರು ಶ್ರೀ ರವಿಶಂಕರ್ ಗುರೂಜಿ ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿ ಮಂಗಳವಾರ ಇಲ್ಲಿಗೆ ಆಗಮಿಸಿದೆ ಎಂದು ಅವರು ತಿಳಿಸಿದ್ದಾರೆ.
ಸಮಿತಿಯ ನಿರ್ದೇಶನದಂತೆ ಈ ಮೂವರು ಸದಸ್ಯರು ಫೈಝಾಬಾದ್ನಲ್ಲಿ ಮೂರು ದಿನಗಳ ಕಾಲ ತಂಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.