ಸಜ್ಜನ್ ಕುಮಾರ್ ಮನವಿ ತಿರಸ್ಕರಿಸಲು ಸುಪ್ರೀಂನಲ್ಲಿ ಕೋರಿದ ಸಿಬಿಐ
ಹೊಸದಿಲ್ಲಿ, ಮಾ. 15: ಸಿಕ್ಖ್ ವಿರೋಧಿ ದಂಗೆ ಕುರಿತು ದಿಲ್ಲಿ ಹೈಕೋರ್ಟ್ ನೀಡಿದ ಜೀವಾವಧಿ ಶಿಕ್ಷೆ ತೀರ್ಪು ಪ್ರಶ್ನಿಸಿ ಕಾಂಗ್ರೆಸ್ನ ಮಾಜಿ ನಾಯಕ ಸಜ್ಜನ್ ಕುಮಾರ್ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಬೇಕು ಎಂದು ಸಿಬಿಐ ಶುಕ್ರವಾರ ಸುಪ್ರೀಂ ಕೋರ್ಟ್ನಲ್ಲಿ ಹೇಳಿದೆ. ಸಜ್ಜನ್ ಕುಮಾರ್ ವಿಚಾರಣೆಗೆ ಬಾಕಿ ಇರುವ ಪ್ರಕರಣದ ಸಾಕ್ಷಿಗಳ ಮೇಲೆ ರಾಜಕೀಯ ಪ್ರಭಾವ ಬೀರುವ ಹಾಗೂ ಬೆದರಿಕೆ ಒಡ್ಡುವ ಸಾಧ್ಯತೆ ಇದೆ ಎಂದು ಸಿಬಿಐ ತನ್ನ ಪ್ರತಿಕ್ರಿಯೆಯಲ್ಲಿ ಹೇಳಿದೆ. ಸಜ್ಜನ್ ಕುಮಾರ್ಗೆ ಜಾಮೀನು ನೀಡಿದರೆ ಪ್ರಕರಣದ ಪಾರದರ್ಶಕ ವಿಚಾರಣೆ ಸಾಧ್ಯವಿಲ್ಲ. ರಾಜಕೀಯ ಪ್ರಭಾವದಿಂದ ಪಾರದರ್ಶಕ ಹಾಗೂ ತ್ವರಿತ ವಿಚಾರಣೆ ಮೇಲೆ ಮೋಡ ಮುಸುಕಬಹುದು. 1984ರ ಸಿಕ್ಖ್ ವಿರೋಧ ದಂಗೆಯ ಸಂತ್ರಸ್ತರಿಗೆ ಸಿಗಬೇಕಾದ ನ್ಯಾಯ ದಾರಿ ತಪ್ಪಬಹುದು ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹಾಗೂ ನ್ಯಾಯಮೂರ್ತಿ ಎಸ್.ಎ. ನಝೀರ್ ಅವರನ್ನೊಳಗೊಂಡ ಪೀಠ ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿದೆ.
Next Story