ಜಗತ್ತಿಗೆ ಹಿಟ್ಲರ್, ಮುಸ್ಸೊಲಿನಿ, ಮೋದಿಯಂತಹ ನಾಯಕರ ಅಗತ್ಯತೆ ಇಲ್ಲ: ದಿಗ್ವಿಜಯ ಸಿಂಗ್
ಹೊಸದಿಲ್ಲಿ, ಮಾ. 16: ಪ್ರಧಾನಿ ನರೇಂದ್ರ ಮೋದಿ ಹಾಗೂ ಸರ್ವಾಧಿಕಾರಿ ಅಡೌಲ್ಫ್ ಹಿಟ್ಲರ್, ಬೆನಿಟೊ ಮುಸೋಲಿನಿ ನಡುವೆ ಶನಿವಾರ ಹೋಲಿಕೆ ಮಾಡಿರುವ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ ಸಿಂಗ್, ಜಗತ್ತಿಗೆ ಮಹಾತ್ಮಾ ಗಾಂಧಿ ಹಾಗೂ ಮಾರ್ಟಿನ್ ಲೂಥರ್ ಕಿಂಗ್ರಂತಹ ನಾಯಕರ ಅಗತ್ಯತೆ ಇದೆ ಎಂದಿದ್ದಾರೆ.
49 ಜನರ ಸಾವಿಗೆ ಕಾರಣವಾದ ನ್ಯೂಝಿಲ್ಯಾಂಡ್ನ ಮಸೀದಿಯಲ್ಲಿ ನಡೆದ ಶೂಟೌಟ್ ಅನ್ನು ಖಂಡಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ ದಿನದ ಬಳಿಕ ಸಿಂಗ್, ಜಗತ್ತಿನ ಸನಾತನ ಧರ್ಮ, ಗೌತಮ ಬುದ್ಧ ಹಾಗೂ ಮಹಾವೀರ ಬೋಧಿಸಿದ ಶಾಂತಿ, ಪ್ರೀತಿ, ಅನುಕಂಪ ಜಗತ್ತಿಗೆ ಅಗತ್ಯತೆ ಇದೆ ಎಂದರು.
ಮೋದಿ ಅವರನ್ನು ಹಿಟ್ಲರ್ ಹಾಗೂ ಮುಸ್ಸೋಲಿನಿಗೆ ಹೋಲಿಸಿದ ಸಿಂಗ್, “ನಾನು ರಾಹುಲ್ ಜಿಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಜಗತ್ತಿಗೆ ದ್ವೇಷ ಹಿಂಸಾಚಾರ ಬೇಕಾಗಿಲ್ಲ. ಬದಲಾಗಿ ಸನಾತನ ಧರ್ಮ, ಗೌತಮ ಬುದ್ಧ ಹಾಗೂ ಮಹಾವೀರ ಬೋಧಿಸಿದ ಪ್ರೀತಿ, ಶಾಂತಿ ಹಾಗೂ ಅನುಕಂಪೆಯ ಅಗತ್ಯತೆ ಇದೆ. ನಮಗೆ ಬೇಕಾಗಿರುವುದು ಮಹಾತ್ಮಾ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ರಂತವರು ಹೊರತು ಹಿಟ್ಲರ್ ಮುಸ್ಸೋಲಿನಿ ಹಾಗೂ ಮೋದಿಯಂತವರಲ್ಲ” ಎಂದಿದ್ದಾರೆ.
ಈ ಜಗತ್ತಿಗೆ ಬೇಕಾಗಿರುವುದು ಧರ್ಮಾಂಧತೆ ಹಾಗೂ ದ್ವೇಷ ತುಂಬಿದ ಉಗ್ರಗಾಮಿತ್ವ ಅಲ್ಲ. ಬದಲಾಗಿ ಅನುಕಂಪ ಹಾಗೂ ಪರಸ್ಪರ ಅರ್ಥೈಸಿಕೊಳ್ಳುವಿಕೆ ಎಂದು ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದರು.
‘‘ನ್ಯೂಝಿಲ್ಯಾಂಡ್ನಲ್ಲಿ ನಡೆದ ಶೂಟಿಂಗ್ ಭಯೋತ್ಪಾದನೆಯ ಹೀನಾಯ ಕೃತ್ಯ. ಅದನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು. ಘಟನೆಯಲ್ಲಿ ಮೃತಪಟ್ಟವರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ’’ ಎಂದು ದಾಳಿಯನ್ನು ಖಂಡಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.