ಅಭಿವೃದ್ಧಿ ಕಡೆಗಣಿಸಿ ಜಾಹೀರಾತಿಗೆ 3,044 ಕೋಟಿ ರೂ. ವ್ಯಯಿಸಿದ ಮೋದಿ: ಮಾಯಾವತಿ ಟೀಕೆ
ಲಕ್ನೊ, ಮಾ.16: ಪ್ರಧಾನಿ ನರೇಂದ್ರ ಮೋದಿ ಜಾಹೀರಾತಿಗೆ 3,044 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಸಾರ್ವಜನಿಕ ಹಣವನ್ನು ಈ ರೀತಿ ದುಂದುವೆಚ್ಚ ಮಾಡುವ ಬದಲು ಉತ್ತರಪ್ರದೇಶದಂತಹ ಹಿಂದುಳಿದ ರಾಜ್ಯಗಳ ಪ್ರತೀ ಹಳ್ಳಿಗೂ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಒದಗಿಸಲು ಬಳಸಬಹುದಿತ್ತು ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.
ಬಿಜೆಪಿಗೆ ಅಭಿವೃದ್ಧಿ ಕಾರ್ಯಕ್ಕಿಂತ ಪ್ರಚಾರವೇ ಮುಖ್ಯವಾಗಿದೆ. ಪ್ರಧಾನಿ ಮೋದಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಗ್ನವಾಗಿದ್ದಾರೆ. ಮೋದಿ ಪ್ರಚಾರ ಕಾರ್ಯಕ್ಕೆ ಬಳಸಿರುವ 3,044 ಕೋಟಿ ರೂ. ಮೊತ್ತವನ್ನು ಉತ್ತರಪ್ರದೇಶದಂತಹ ಹಿಂದುಳಿದ ರಾಜ್ಯಗಳ ಹಳ್ಳಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆ ಒದಗಿಸಲು ಬಳಸಬಹುದಿತ್ತು ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರಕಾರ ಉದ್ಯೋಗ, ಬಡತನ ನಿರ್ಮೂಲನೆ , ಕೃಷಿ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದ್ದು ಇದೀಗ ತನ್ನ ವೈಫಲ್ಯವನ್ನು ಮರೆಮಾಚಿ ಜನರ ಗಮನ ಬೇರೆಡೆ ಸೆಳೆಯಲು ಜಾಹೀರಾತು ತಂತ್ರ ಬಳಸುತ್ತಿದೆ. ಜನತೆ ಈ ಬಗ್ಗೆ ಜಾಗರೂಕತೆ ವಹಿಸಬೇಕು ಎಂದು ಮಾಯಾವತಿ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಬಿಜೆಪಿ ಎದುರು ಬಿಎಸ್ಪಿ ಮತ್ತು ಎಸ್ಪಿ ಮೈತ್ರಿಕೂಟ ರಚಿಸಿಕೊಂಡಿವೆ.