ಕಾಂಗ್ರೆಸ್ ನಾಯಕತ್ವ ತಲೆಮಾರಿಗೆ ವರ್ಗಾವಣೆ: ಅರುಣ್ ಜೇಟ್ಲಿ
ಹೊಸದಿಲ್ಲಿ, ಮಾ. 15: ಒಬ್ಬರು ವಿಫಲರಾದರು. ಇನ್ನೊಬ್ಬರು ಮುಂದುವರಿಯುತ್ತಿಲ್ಲ ಎಂದು ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶಿಸಿರುವ ಕುರಿತಂತೆ ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷ ತಲೆಮಾರಿನ ಬಳಿಕ ತಲೆಮಾರಿಗೆ ನಾಯಕತ್ವವನ್ನು ಕುಟುಂಬದ ಸದಸ್ಯರಿಗೆ ವರ್ಗಾಯಿಸುತ್ತಿದೆ. ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಚರಿತ್ರೆಯಲ್ಲಿ ನಾಯಕತ್ವ ಜವಾಹರ್ಲಾಲ್ ನೆಹರೂ ಅವರಿಂದ ಇಂದಿರಾಗಾಂಧಿಗೆ, ಅವರಿಂದ ಸಂಜಯ್ ಗಾಂಧಿಗೆ, ಅವರಿಂದ ರಾಜೀವ್ ಗಾಂಧಿಗೆ ವರ್ಗಾವಣೆಯಾಗಿದೆ ಎಂದು ಅವರು ಹೇಳಿದರು.
ರಾಜೀವ್ ಗಾಂಧಿ ಹತ್ಯೆಯ ಬಳಿಕ ಸಣ್ಣ ಅವಧಿಯಲ್ಲಿ ಕಾಂಗ್ರೆಸ್ ತನ್ನ ವಂಶದ ಸಂಕೋಲೆಯನ್ನು ಕಳಚಿಕೊಳ್ಳಲು ಪ್ರಯತ್ನಿಸಿತು. ಆದರೆ, ಕಳಚಿಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲ ಎಂದು ಅವರು ‘ಅಜೆಂಡಾ 2019’ ಕುರಿತ ತನ್ನ ಬ್ಲಾಗ್ನಲ್ಲಿ ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷತೆಯನ್ನು ದೀರ್ಘಕಾಲ ನಿರ್ವಹಿಸಿದರು. ಅನಂತರ ಅವರು ಅದನ್ನು ತನ್ನ ಪುತ್ರ ರಾಹುಲ್ ಗಾಂಧಿಗೆ ವರ್ಗಾಯಿಸಿದರು. ಕಾಂಗ್ರೆಸ್ ಪಕ್ಷ ತನ್ನ ನಾಯಕತ್ವವನ್ನು ತನ್ನ ಕುಟುಂಬಕ್ಕೆ ವರ್ಗಾಯಿಸುತ್ತಿದೆ. ಈಗ ಪಕ್ಷ ಡೋಲಾಯಮಾನ ಸ್ಥಿತಿ ಎದುರಿಸುತ್ತಿದೆ. ಈಗ ಕುಟುಂಬದ ಇನ್ನೊಬ್ಬರು ಸದಸ್ಯರು ಪ್ರವೇಶಿಸಿದ್ದಾರೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.