ಅತ್ಯಾಚಾರ ಆರೋಪಿ ಬಿಷಪ್ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕ್ರೈಸ್ತ ಸನ್ಯಾಸಿನಿಗೆ ನೋಟಿಸ್
ತಿರುವನಂತಪುರ, ಮಾ. 16: ಫ್ರಾನ್ಸಿಸ್ಕನ್ ಕ್ಲಾರಿಸ್ಟ್ ಕಾಂಗ್ರೆಗೇಶನ್ ಅನ್ನು ಬಿಡುವಂತೆ ಅತ್ಯಾಚಾರ ಆರೋಪಿ ಜಲಂಧರ್ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿಸ್ಟರ್ ಲೂಸಿ ಕಲಾಪುರ ಅವರಿಗೆ ಕಾಂಗ್ರೆಗೇಶನ್ ಅಂತಿಮ ನೋಟಿಸು ಜಾರಿ ಮಾಡಿದೆ.
ಕಾಂಗ್ರೆಗೇಶನ್ ಬಿಡುವಂತೆ ಅಥವಾ ಉಚ್ಛಾಟನೆ ಎದುರಿಸುವಂತೆ ಚರ್ಚ್ ಪ್ರಾಧಿಕಾರ ತನಗೆ ನೋಟಿಸು ನೀಡಿದೆ ಎಂದು ಕಲಾಪುರ ತಿಳಿಸಿದ್ದಾರೆ.
ಕಾಂಗ್ರೆಗೇಶನ್ ಬಿಡುವಂತೆ ಚರ್ಚ್ ಹೇಳಿರುವುದು ವಿಷಾದದ ವಿಚಾರ. ನಾನು 17ನೇ ವರ್ಷದವಳಿರುವಾಗ ಚರ್ಚ್ಗೆ ಸೇರಿದೆ. ನಾನು ಧಾರ್ಮಿಕ ಜೀವನದ ಎಲ್ಲ ತತ್ವಗಳನ್ನು ಅನುಸರಿಸುತ್ತಿದ್ದೇನೆ. ನನಗೆ ಬೇರೆ ಜೀವನ ಇಲ್ಲ. ಎರಡನೇ ನೋಟಿಸ್ಗೆ ನನ್ನ ಪ್ರತಿಕ್ರಿಯೆ ಸ್ಪಷ್ಟವಾಗಿತ್ತು. ನಾನು ನನ್ನ ನಿಲುವನ್ನು ವಿವರಿಸಿದ್ದೇನೆ ಎಂದು ಕಲಾಪುರ ಹೇಳಿದ್ದಾರೆ.
ಕಾಂಗ್ರೆಗೇಶನ್ನ ನಿಯಮ ಹಾಗೂ ಧಾರ್ಮಿಕ ಜೀವನದ ತತ್ವಗಳಿಗೆ ವಿರುದ್ಧದ ದಾರಿಯಲ್ಲಿ ಕಲಾಪುರ ಸಾಗುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಗೇಶನ್ನ ಸೂಪೀರಿಯರ್ ಜನರಲ್ ಸಿಸ್ಟರ್ ಅನ್ನಾ ಜೋಸೆಫ್ ನೋಟಿಸು ಜಾರಿ ಮಾಡಿದ್ದಾರೆ. ಕಲಾಪುರ ವಯನಾಡ್ ಜಿಲ್ಲೆಯ ಮಾನಂದವಾಡಿ ಸಂತ ಮೇರಿ ಪ್ರಾಂತ್ಯಕ್ಕೆ ಸೇರಿದವರು.